ಬೆಂಗಳೂರು: ಪಕ್ಷದಲ್ಲಿ ಆಗುತ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಂತರಿಕ ಜಗಳವೇ ಆಯ್ತು.ಇವರಿಂದ ಸರ್ಕಾರವನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಜನರು ಮಾತನಾಡುತ್ತಿದ್ದಾರೆ. ಇಗೋ ಸಮಸ್ಯೆಯಿಂದ ಬಿಜೆಪಿಗೆ ದೊಡ್ಡ ಹಾನಿಯಾಗುತ್ತಿದೆ. ಇಷ್ಟೆಲ್ಲಾ ಪಕ್ಷದಲ್ಲಿ ಆಗುತ್ತಿರುವ ರಾದ್ದಾಂತವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನೊಮ್ಮೆ ನಾನು ದೆಹಲಿಗೆ ಹೋಗುವ ನಿರ್ಧಾರ ಮಾಡಿದ್ದೇನೆ. ಡಿಸೆಂಬರ್ 3 ರಂದು ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಇದರ ಬಗ್ಗೆ ಚರ್ಚಿಸಿ ಇದಕ್ಕೆಲ್ಲ ಬ್ರೇಕ್ ಹಾಕುವಂತೆ ಹೈಕಮಾಂಡ್ಗೆ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು. ಕರ್ನಾಟಕ ಬಿಜೆಪಿ ಬಗ್ಗೆ ನಾನು ವರಿಷ್ಠರಿಗೆ ಎರಡು ಪತ್ರ ಬರೆದಿದ್ದೇನೆ. ನಾನು ಅಧ್ಯಕ್ಷ ಇದ್ದಾಗಲೂ ಇದಕ್ಕಿಂತ ದೊಡ್ಡ ಗುಂಪುಗಳಿದ್ದವು. ಪಕ್ಷದ ಕಟ್ಟಿದ್ದು ನಾವು ಅಂತ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಪ್ರಬಲವಾಗಿ ಸೆಣಸಾಡುತ್ತಿದ್ದವು. ಆದರೆ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಯಾವತ್ತೂ ಬೀದಿಗೆ ಇಳಿದಿರಲ್ಲ ಎಂದರು.