ವಿಜಯಸಾಕ್ಷಿ ಸುದ್ದಿ, ಗದಗ:ವಿಶೇಷ ಚೇತನರ ಕಲ್ಯಾಣಕ್ಕೆ ಮೀಸಲಾಗಿದ್ದ ಅನುದಾನವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಅಧ್ಯಕ್ಷ ಶಶಿಧರ ಶಿರಸಂಗಿ ನೇತೃತ್ವದಲ್ಲಿ ವಿಶೇಷ ಚೇತನರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ವಿಶೇಷ ಚೇತನರು, ಶ್ರವಣ ಸಾಧನ, ಬ್ರೆöÊಲ್ ಕಿಟ್, ತ್ರಿಚಕ್ರ ವಾಹನ ಸೇರಿದಂತೆ ಇನ್ನು ಹತ್ತು ಹಲವಾರು ಸೌಲಭ್ಯಗಳಿಗೆ ಸರಕಾರ ಅನುದಾನ ಕಡಿತ ಮಾಡಿ, ಸಮಾಜದ ದುರ್ಬಲ ವರ್ಗದ ಜನರಿಗೆ ಅನ್ಯಾಯ ಮಾಡಿದೆ ಎಂದು ನಿರತರು ಆರೋಪಿಸಿದರು.
ಕಳೆದ ವರ್ಷ ವಿಕಲಚೇತನರ ಅಗತ್ಯಗಳಿಗೆ ಸರ್ಕಾರ 53 ಕೋಟಿ ರೂ. ನೀಡಿತ್ತು. ಆದರೆ ಈ ಮೊತ್ತದ ಹಣ ಅತ್ಯಲ್ಪವಾಗಿದ್ದರೂ 2024-25ನೇ ಸಾಲಿನಲ್ಲಿ ಈ ಹಣವನ್ನು 10 ಕೋಟಿ ರೂ.ಗೆ ಇಳಿಕೆ ಮಾಡಿದೆ. ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ಗಾಲಿಕುರ್ಚಿಗಳನ್ನು ನೀಡುವ ಮತ್ತೊಂದು ಯೋಜನೆಯಲ್ಲಿಯೂ ವಿಳಂಬವಾಗಿದ್ದು, ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟ ಇದನ್ನು ಖಂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಭಾರತಿ ಮೂರಸಿಳ್ಳಿ, ಖಾಜಾ ಹುಸೇನ, ಬಸವರಾಜ ಓಲಿ, ಬಸವರಾಜ ನಾಯ್ಕರ, ಶಿವಾನಂದ ಹಾದಿಮನಿ, ಫಕೀರೇಶ ಹಡಪದ, ಮೌನೇಶ ಬಡಿಗೇರ, ಜ್ಯೋತಿ ಗೌಳಿ, ಜ್ವಾಲಮ್ಮ ಮಂಟಗಣಿ, ವನಜಾಕ್ಷಿ ಹಾಲಗಿಮಠ, ಹಾಲೇಶ ಜಗದರ, ಪ್ರಕಾಶ ಕಾಟನಳ್ಳಿ, ಶಿವಾನಂದ ಕುದುರಿ, ಫಕೀರೇಶ ಚಿಗಹಳ್ಳಿ, ನಾಗರಾಜ ಪೂಜಾರ, ನಿಂಗಪ್ಪ ಹುಳ್ಳಿ, ರಾಜಶೇಖರ ಕಣಕೇರಿ, ಮಂಜುನಾಥ ರಾಮಗಿರಿ, ಪ್ರೇಮವ್ವ ಬಡಪ್ಪನವರ ಮುಂತಾದವರಿದ್ದರು.