ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯ ತುಣುಕನ್ನು ಸಂಪೂರ್ಣ ತಿರುಚಿ ಇಲ್ಲದ ಆರೋಪ ಹೊರಿಸಲಾಗಿದೆ ಎಂದು ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರ ಬಂಧನ ಖಂಡಿಸಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಗದಗ ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.
ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಂಸತ್ತಿನಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ರ ಕುರಿತು ಮಾತನಾಡುವಾಗ ಅವರ ಹೇಳಿಕೆಯ ಭಾಷಣದ ತುಣುಕನ್ನು ತಪ್ಪಾಗಿ ಅರ್ಥ ಬರುವ ಹಾಗೆ ತಿರುಚಿದ್ದು ಖಂಡನೀಯ. ಡಾ. ಬಿ.ಆರ್. ಅಂಬೇಡ್ಕರರು ೧೯೫೨ರಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಪ್ರಚಾರ ಮಾಡಿ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಅಂಬೇಡ್ಕರರ ಬಗ್ಗೆ ಭಾರತೀಯ ಜನತಾ ಪಾರ್ಟಿಗೆ ಅಪಾರ ಗೌರವವಿದ್ದು, ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಂಬೇಡ್ಕರರ ೫ ಪ್ರಮುಖ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಅಂಬೇಡ್ಕರರ ಕುರಿತು ಬಿಜೆಪಿಗೆ ಇರುವ ಗೌರವ. ಕಾಂಗ್ರೆಸ್ನವರು ಅಂಬೇಡ್ಕರರ ಹೆಸರನ್ನು ಕೇವಲ ಮತಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿದೆ. ಅವರ ಸಾವಿನ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಗೂ ಸ್ಥಳವನ್ನು ನೀಡದ ಕಾಂಗ್ರೆಸ್ ಅಗೌರವ ತೊರಿಸಿದ್ದು ದೇಶದ ಜನತೆಗೆ ಗೊತ್ತಿರುವ ಸಂಗತಿ ಎಂದರು.
ಈ ಸಂದರ್ಭದಲ್ಲಿ ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ, ಪ್ರಮುಖರಾದ ಅಶೋಕ ಸಂಕಣ್ಣವರ, ಉಮೇಶ ಚನ್ನುಪಾಟೀಲ, ಪ್ರಕಾಶ ಕೊತಂಬರಿ, ನವೀನ ಕೊಟೆಕಲ್, ಶಿವು ಗೊಟೂರ, ಸುರೇಶ ಚವ್ಹಾಣ, ನವೀನ ಕುರ್ತಕೋಟಿ, ಪ್ರವೀಣ ಹಡಪದ, ವಿನಾಯಕ ಹರಕೇರಿ, ಸಚಿನ್ ಮಡಿವಾಳರ, ಗೋಪಾಲ ಗಡ್ಡದವರ, ಮಾಂತೇಶ ಬಾತಾಖಾನಿ, ಅರುಣ ಹುಲ್ಲೂರ, ರವಿ ಮಾನ್ವಿ, ಯೋಗೇಶ್ವರಿ ಭಾವಿಕಟ್ಟಿ, ಸಂತೋಷ ಮುಳ್ಳಾಳ, ರಾಹುಲ ಸಂಕಣ್ಣವರ ಮುಂತಾದವರಿದ್ದರು.
ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಚಳಿಗಾಲದ ಅಧಿವೇಶನದಲ್ಲಿ ನಡೆಯಬೇಕಾದ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಇದ್ದ ವಿಷಯಗಳನ್ನು ಮರೆಮಾಚಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಸರ್ಕಾರದ ಸಚಿವರುಗಳೇ ಕುಮ್ಮಕ್ಕು ನೀಡಿ ಜನರ ಅಭಿವೃದ್ಧಿ ವಿಚಾರಗಳನ್ನು ದಿಕ್ಕು ತಪ್ಪಿಸಲು ಹೊರಟಿದೆ. ಇದು ರಾಜ್ಯದ ಜನತೆಗೆ ಗೊತ್ತಿರುವ ಸಂಗತಿ. ಸುವರ್ಣಸೌಧದಲ್ಲಿ ನಡೆದ ಘಟನೆಯಿಂದ ವಿರೋಧ ಪಕ್ಷದ ನಾಯಕರನ್ನು ನಡೆಸಿಕೊಳ್ಳುವ ರೀತಿ ಸಾಬೀತಾಗಿದೆ ಎಂದರು.