ವಿಜಯಸಾಕ್ಷಿ ಸುದ್ದಿ, ಮುಳಗುಂದ:ಮನುಷ್ಯರಲ್ಲಿನ ದುರ್ಗುಣಗಳನ್ನು ಹೊಡೆದುಹಾಕಿ ಸದ್ಗುಣ, ಸದ್ವಿಚಾರಗಳನ್ನು ಹುಟ್ಟು ಹಾಕಲು ಪುರಾಣ-ಪ್ರವಚನಗಳು ಸಹಕಾರಿಯಾಗುತ್ತವೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ್ ಹೇಳಿದರು.
ಅವರು ಪಟ್ಟಣದ ಸಮೀಪದ ಹರ್ತಿ ಗ್ರಾಮದಲ್ಲಿ 12 ದಿನಗಳ ಕಾಲ ಮಣಕವಾಡದ ದೇವಮಂದಿರ ಮಾಹಾಮಠದ ಅಭಿನವ ಮೃತ್ಯುಂಜಯ ಮಾಹಾಸ್ವಾಮಿಗಳ `ವಚನ ದರ್ಶನ’ ಆಧ್ಯಾತ್ಮಿಕ ಪ್ರವಚನ ಪ್ರಾರಂಭೋತ್ಸವದಲ್ಲಿ ಮಾತನಾಡುತ್ತಿದ್ದರು.
ಇಂದಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದು, ಧಾರ್ಮಿಕ ಭಾವನೆಯಿಂದ ವಿಮುಖರಾಗುತ್ತಿದ್ದಾರೆ. ನಮ್ಮ ಸಂಸ್ಕೃತಿ-ಪರಂಪರೆ ಉಳಿಸಿ ಬೆಳೆಸಬೇಕು. ತಂದೆ, ತಾಯಿ, ಗುರುಗಳನ್ನು ಮರೆಯಬಾರದು. ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನಡೆ ಸಾಗಲು ಸಾಧ್ಯವಾಗುತ್ತದೆ. ತಂದೆ-ತಾಯಿಗಳು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಈಗಿನಿಂದಲೇ ನೀಡಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲು, ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಅಭಿನವ ಮೃತ್ಯುಂಜಯ ಮಾಹಾಸ್ವಾಮೀಜಿ ಪ್ರವಚನ ನೀಡಿ ಮಾತನಾಡಿ, ಸಂತರ, ಶಿವಯೋಗಿಗಳ ಪ್ರವಚನಗಳನ್ನು ಆಲಿಸುವುದರಿಂದ ಬದುಕಿನಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ನಮ್ಮ ಬದುಕಿನಲ್ಲಿ ಹೆತ್ತು ಹೊತ್ತು ಸಾಕಿ ಸಲುಹಿದ ತಂದೆ-ತಾಯಿಗಳನ್ನು, ವಿದ್ಯಾ ಬುದ್ಧಿಯನ್ನು ಕಲಿಸಿದ ಗುರುಗಳನ್ನು ಮರೆಯಬಾರದು. ತಂದೆ-ತಾಯಿ ತಮ್ಮ ಕಷ್ಟಗಳನ್ನು ಬದಿಗಿಟ್ಟು ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಾರೆ. ಅವರ ಋಣವನ್ನು ಎಂದಿಗೂ ತೀರಿಸಲಾಗದು. ತಂದೆ-ತಾಯಿಗಳು ಬದುಕಿದ್ದಾಗ ಅವರಿಗೆ ಕಷ್ಟ ಬಾರದಂತೆ ಮುಪ್ಪಿನ ಸಮಯದಲ್ಲಿ ಸಾಕಿ ಸಲುಹಬೇಕು. ಸಂತರ, ಶರಣದ ಆಧ್ಯಾತ್ಮಿಕ ವಚನಗಳನ್ನು ನಿತ್ಯ ಪಠಿಸುವುದರಿಂದ ಹಾಗೂ ಪುರಾಣ-ಪ್ರವಚನಗಳನ್ನು ಕೇಳುವುದರಿಂದ ಬದುಕು ಹಸನಾಗುತ್ತದೆ ಎಂದರು.
ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಾಗೂ ಅಡ್ನೂರ ಬ್ರಹ್ಮಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಾಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯಕುಮಾರ ಗಡ್ಡಿ ಮುಂತಾದವರು ಇದ್ದರು.