ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ವಿದ್ಯಾರ್ಥಿ ಜೀವನದಲ್ಲಿ ಶೃದ್ಧೆ, ಸಮಯ ಪಾಲನೆ, ಶಿಸ್ತು ರೂಢಿಸಿಕೊಂಡು ಸ್ಪಷ್ಟ ಗುರಿಯೆಡೆಗೆ ಸಾಗಿದರೆ ಉತ್ತುಂಗ ಸ್ಥಾನಕ್ಕೇರಬಹುದು ಎಂದು ಹಿರಿಯ ಸಾಹಿತಿ ಹಾಗೂ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಅವರು ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ವಿಜನ್ ಪ.ಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಾಧನೆ ಸಾಧ್ಯವಿದೆ. ಧನಾತ್ಮಕ ಯೋಚನೆ, ಆಶಾಭಾವನೆ ಮತ್ತು ನಿರೀಕ್ಷೆಗಳಿದ್ದಲ್ಲಿ ಸಾಧನೆಗಳು ತಾನಾಗಿ ಒಲಿಯುತ್ತವೆ. ವಿದ್ಯಾರ್ಥಿ ಜೀವನ ಎನ್ನುವ ಅಮೂಲ್ಯ ಕ್ಷಣಗಳು ಎಂದಿಗೂ ಮರೆಯಲಾರದಂತೆ ಇರುವಂತೆ ಮಾಡುವದು ವಿದ್ಯಾರ್ಥಿಗಳ ಕೈಯಲ್ಲಿದೆ. ಕಲಿತ ವಿದ್ಯಾಸಂಸ್ಥೆಯಲ್ಲಿ ನಿಮ್ಮ ಹೆಜ್ಜೆ ಗುರುತುಗಳನ್ನು ಉಳಿಸುವಂತಹ ಸಾಧನೆಯ ಜತೆಗೆ ತಂದೆ-ತಾಯಿಗಳ ಕನಸನ್ನು ನನಸು ಮಾಡಿ ಎಂದ ಅವರು, ಶಿಕ್ಷಣದಿಂದ ಸಾಧನೆ ಮಾಡಿದ ಅನೇಕ ಮಹನೀಯರ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಲೋಹಿತ್ ನೆಲವಿಗಿ ಮಾತನಾಡಿ, ಶಿಸ್ತು, ಸಂಯಮ ಹಾಗೂ ಕಲಿಕಾಸಕ್ತಿ, ಎಲ್ಲ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುವಿಕೆ ಭವಿಷ್ಯಕ್ಕೆ ಮೆಟ್ಟಿಲಾಗುತ್ತವೆ. ಈ ಹಿನ್ನೆಲೆಯಲ್ಲಿ ಸಿಗುವ ಅವಕಾಶ ಬಳಸಿಕೊಳ್ಳುವ ರೀತಿಯಲ್ಲಿ ನಿಮ್ಮ ಬದುಕು ರೂಪಿತವಾಗುತ್ತದೆ. ನಿಮ್ಮಲ್ಲಿರುವ ಸಾಮಥ್ಯವನ್ನು ವ್ಯರ್ಥ ಮಾಡಿಕೊಳ್ಳದೆ ಅದನ್ನು ಉಪಯೋಗಿಸಿ ಸಾಧನೆ ಮಾಡುವ ವಿಶ್ವಾಸವನ್ನು ಹೊಂದಿ ಮುಂದೆ ಸಾಗಿ ಎಂದು ಶುಭ ಹಾರೈಸಿದರು.
ಪ್ರಾಚಾರ್ಯ ಮಂಜುನಾಥ ಬಂಡಿವಾಡ, ಡಿ.ಎಂ. ಪೂಜಾರ, ಉಪನ್ಯಾಸಕರಾದ ಗಿರೀಶರಡ್ಡಿ, ಬಸವರಾಜ ಶೆಟ್ಟರ, ರಾಜಶೇಖರ, ವಿಜಯಕುಮಾರ ಹಾಗೂ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿಗಳು ಹಾಜರಿದ್ದರು. ವಿದ್ಯಾರ್ಥಿಗಳಾದ ಐಶ್ವರ್ಯ, ಹರ್ಷಿತಾ, ಅಂಜಲಿ, ಸ್ನೇಹಾ, ಆರತಿ, ಉಸ್ಮಾ, ತೇಜಸ್ವಿನಿ, ಸೃಷ್ಟಿ ನಿರೂಪಿಸಿದರು.