ರಾಮನಗರ: ಇತ್ತೀಚೆಗೆಬಾಂಬ್ ಬೆದರಿಕೆ ಕರೆಗಳು ದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಎಲ್ಲಿ ನೋಡಿದ್ರೂ ಹೋಟೆಲ್, ಏರ್ಪೋರ್ಟ್ಗಳಿಗೆ ಅನುಮಾನಸ್ಪದವಾಗಿ ಬಾಂಬ್ ಬೆದರಿಕೆ ಕರೆಗಳು ಬರುತ್ತಲೇ ಇದೆ. ಈ ಮಧ್ಯೆ ರಾಮನಗರ ಜಿಲ್ಲೆಯ ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿದೆ.
ಹೀಗಾಗಿ ಬಿಡದಿ ರೈಲ್ವೆ ನಿಲ್ದಾಣದಲ್ಲಿ ಶ್ವಾನದಳ, ಬಾಂಬ್ ಸ್ಕ್ವಾಡ್ನಿಂದ ಪರಿಶೀಲನೆ ನಡೆಸಲಾಯಿತು. ರೈಲ್ವೆ ಅಧಿಕಾರಿಗಳು ಹಾಗೂ ರಾಮನಗರ ಡಿವೈಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಬಾಂಬ್ ಡಿಟೆಕ್ಟರ್ ಮೂಲಕ ಶೋಧ ಕಾರ್ಯ ನಡೆಸಲಾಯಿತು. ಪಾಕಿಸ್ತಾನ ಪರ ಗೋಡೆಬರಹ ಬರೆದಿದ್ದ ಆರೋಪಿಗಳ ಪರವಾಗಿ ಕರೆ ಬಂದಿದೆ ಎನ್ನಲಾಗಿದೆ.
ಬಿಡದಿಯ ಕಂಪನಿಯೊಂದರ ಗೋಡೆಯಲ್ಲಿ ಪಾಕಿಸ್ತಾನ ಪರ ಬರಹ ಪ್ರಕಟಿಸಿದ್ದ ಆರೋಪದಲ್ಲಿ ಹೈಮದ್ ಹುಸೇನ್, ಸಾಧಿಕ್ನನ್ನು ಬಂಧಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಬಿಡದಿ ರೈಲ್ವೆ ಸ್ಟೇಷನ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಲಾಗಿದೆ. ಬೆಂಗಳೂರಿನ ರೈಲ್ವೆ ಕಂಟ್ರೋಲ್ ರೂಂಗೆ ದುಷ್ಕರ್ಮಿಗಳು ಕರೆ ಮಾಡಿದ್ದರು. ಇದೀಗ ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮೇಲೂ ತೀವ್ರ ನಿಗಾ ಇಡಲಾಗಿದೆ.