ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಬಡವರಿಗೆ ಹಾಗೂ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸುತ್ತಿದ್ದ ನಟ ಉಪೇಂದ್ರ ಅವರು ಈಗ ರೈತರಿಗೆ ಬೆಳಕಾಗಲು ನಿಂತಿದ್ದಾರೆ.
ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ. ಉಪೇಂದ್ರ ಅವರು ಈಗಾಗಲೇ 3 ಸಾವಿರ ಸಿನಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಈಗ ರೈತರಿಗೆ ಆಸರೆಯಾಗಲು ಮುಂದಾಗಿದ್ದಾರೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದರು. ದಾನಿಗಳು ನೀಡಿರುವ ಹಣದಲ್ಲಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ, ಅದನ್ನು ದಿನಸಿ ಕಿಟ್ ಗಳ ಜೊತೆಗೆ ವಿತರಿಸುತ್ತೇವೆ ಎಂದು ಉಪೇಂದ್ರ ಹೇಳಿದ್ದಾರೆ. ಹೀಗಾಗಿ ರೈತರಿಂದ ನೇರವಾಗಿ ಟೊಮೆಟೋ ಖರೀದಿಸಿದ್ದಾರೆ. ಸದ್ಯ ಅಗತ್ಯ ಇರುವವರಿಗೆ ಹಂಚಿಕೆ ಮಾಡಿದ್ದಾರೆ.
ಟೊಮೆಟೋ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ, ರೈತರು ರಸ್ತೆಯ ಮಧ್ಯೆಯೇ ಎಸೆದು ಹೋಗುತ್ತಿದ್ದರು. ಒಂದೆಡೆ ಕೊರೊನಾ, ಇನ್ನೊಂದೆಡೆ ಬೆಲೆ ಕುಸಿತ ರೈತರನ್ನು ಬೀದಿಗೆ ತಂದು ನಿಲ್ಲಿಸಿತ್ತು. ಇದನ್ನು ಗಮನಿಸಿದ ನಟ ಉಪೇಂದ್ರ ಅವರು ರೈತರಿಂದ ನೇರವಾಗಿ ಖರೀದಿಸುವುದಾಗಿ ತಿಳಿಸಿದ್ದರು. ಸದ್ಯ ಆ ಕಾಯಕ ಮಾಡಿದ್ದಾರೆ.