ಸಿನಿಮಾ ಶೂಟಿಂಗ್ ವೇಳೆ ಎಷ್ಟೇ ಎಚ್ಚರಿಕೆಯಿಂದಿದ್ದರು ಒಂದಲ್ಲ ಒಂದು ಅನಾಹುತಗಳು ನಡೆಯುತ್ತಲೆ ಇರುತ್ತವೆ. ಈಗಾಗಲೇ ಕಲಾವಿದರ ರಕ್ಷಣೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರು ಆಗಾಗ ಅಪಾಯಕಾರಿ ಘಟನೆಗಳು ನಡೆಯುತ್ತಲೆ ಇರುತ್ತದೆ. ಇದೀಗ ಖ್ಯಾತ ನಟ ರಿತೇಶ್ ದೇಶಮುಖ್ ನಟನೆಯ ರಾಜಾ ಶಿವಾಜಿ ಸಿನಿಮಾ ತಂಡದಲ್ಲಿ ಕೂಡ ಇಂಥದ್ದೇ ಅವಘಡ ಸಂಭವಿಸಿದೆ.
26 ವರ್ಷದ ಡ್ಯಾನ್ಸರ್ ಒಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು, 2 ದಿನಗಳು ಕಳೆದ ಬಳಿಕ ಅವರ ಶವ ಪತ್ತೆ ಆಗಿದೆ. ಈ ಅವಘಡ ಸಂಭವಿಸಿದ ಬಳಿಕ ‘ರಾಜಾ ಶಿವಾಜಿ’ ಚಿತ್ರದ ಶೂಟಿಂಗ್ ನಿಲ್ಲಿಸಲಾಗಿದೆ.
ಎರಡು ದಿನಗಳ ಹಿಂದೆ ಸತಾರಾ ಜಿಲ್ಲೆಯಲ್ಲಿ ‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಕೃಷ್ಣ ಮತ್ತು ವೆನ್ನಾ ನದಿಯ ಸಂಗಮದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಈ ಚಿತ್ರೀಕರಣದಲ್ಲಿ ಡ್ಯಾನ್ಸರ್ ಸೌರಭ್ ಶರ್ಮಾ ಕೂಡ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ಕೃಷ್ಣ ನದಿ ಬಳಿ ತೆರಳಿದ ಸೌರಭ್ ಅವರು ಕೊಚ್ಚಿಕೊಂಡು ಹೋಗಿದ್ದು 2 ದಿನಗಳ ಬಳಿಕ ಅವರು ಶವವಾಗಿ ಪತ್ತೆಯಾಗಿದ್ದಾರೆ.
‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣಕ್ಕಾಗಿ ಡ್ಯಾನ್ಸರ್ಗಳು ಬಣ್ಣದ ಪೌಡರ್ ಹಚ್ಚಿಕೊಂಡಿದ್ದರು. ಅದನ್ನು ತೊಳೆದುಕೊಳ್ಳಲು ಡ್ಯಾನ್ಸರ್ ಸೌರಭ್ ಅವರು ಕೃಷ್ಣ ನದಿಗೆ ಇಳಿದಿದ್ದು ಈ ವೇಳೆ ಆಯ ತಪ್ಪಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಕೂಡಲೇ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಯಿತು. ಆದರೂ ಕೂಡ ಸೌರಭ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಪಘಾತದಿಂದ ಸೌರಭ್ ಶರ್ಮಾ ಸಾವು ಸಂಭವಿಸಿದೆ ಎಂದು ಸತಾರಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಈ ದುರ್ಘಟನೆ ನಡೆದಿದ್ದರಿಂದ ‘ರಾಜಾ ಶಿವಾಜಿ’ ಸಿನಿಮಾದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ರಿತೇಶ್ ದೇಶಮುಖ್ ಅವರೇ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ಒಡೆತನದ ‘ಮುಂಬೈ ಫಿಲ್ಮ್ ಕಂಪನಿ’ ಮೂಲಕ ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.