ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆಯ ಅಬ್ಬರ ತಾಲೂಕಿನ ಅನೇಕ ಕಡೆಗಳಲ್ಲಿ ಅವಾಂತರ ಸೃಷ್ಟಿ ಮಾಡಿದ್ದು, ಅನೇಕ ಗ್ರಾಮಗಳಲ್ಲಿ ರವಿವಾರ ಸುರಿದ ಭಾರೀ ಮಳೆ-ಬಿರುಗಾಳಿಗೆ ಗ್ರಾಮಸ್ಥರು ಪರದಾಡುವಂತಾಗಿದೆ.
ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ರಕ್ಕಸ ಮಳೆ ಗ್ರಾಮದಲ್ಲಿ ಅವಾಂತರ ಸೃಷ್ಟಿಸಿದೆ. ಜೋರು ಗಾಳಿಗೆ ಮನೆಗಳ ಮೆಲ್ಚಾವಣಿಗೆ ಹೊದಿಸಿದ್ದ ತಗಡಿನ ಶೀಟ್ಗಳು ಹಾರಿ ಹೋಗಿದ್ದು, ಹಲವು ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಇದೇ ಗ್ರಾಮದಲ್ಲಿ ಕೆಲ ಮನೆಗಳು ಸಂಪೂರ್ಣ ನೆಲಕಚ್ಚಿದ್ದು, ಇಡಿ ರಾತ್ರಿ ಜನರು ನಿದ್ದೆಯಿಲ್ಲದೆ ಬೇರೆಯವರ ಮನೆಯನ್ನು ಅವಲಂಬಿಸುವಂತಾಗಿತ್ತು. ಗ್ರಾಮದ ನಿಂಗಪ್ಪ ನೀಲಪ್ಪ ರಗಟಿ ಅವರ ಗಿರಣಿ ಮನೆ, ಪರಸಪ್ಪ ಚನಬಸಪ್ಪ ಚಿಂಚಲಿ, ಲಕ್ಷ್ಮವ್ವ ಕುರಿ, ಅನಸವ್ವ ಯಲ್ಲಪ್ಪ ಕೊಂಚಿಗೇರಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.
ದೊಡ್ಡೂರು ಗ್ರಾ.ಪಂ ವ್ಯಾಪ್ತಿಯ ಉಂಡೇನಹಳ್ಳಿಯಲ್ಲೂ ಮಳೆ ಅನಾಹುತ ಮಾಡಿದ್ದು, ಹತ್ತಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಶೇಖಪ್ಪ ಬಳಗಲಿ ಅವರ ಮನೆಯ ಮೇಲೆ ಮರವೊಂದು ಮುರಿದು ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದರಂತೆ ಸೂರಣಗಿ ಗ್ರಾಮದಲ್ಲೂ ಭಾರೀ ಮಳೆಯಾಗಿದೆ. ಗ್ರಾಮದ ಸೋಮಣ್ಣ ಭೀಮಪ್ಪ ಪೂಜಾರ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಅಸುನೀಗಿದ ಕುರಿತು ವರದಿಯಾಗಿದೆ.
ಮಳೆಯ ರಭಸಕ್ಕೆ ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಯಾವುದೇ ಅನಾಹುತಗಳು ಸಂಭವಿಸಿಲ್ಲ. ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಜನತೆಗೆ ಮಳೆ ತಂಪು ನೀಡಿತ್ತು. ಸೂರಣಗಿ, ಹರದಗಟ್ಟಿ, ದೊಡ್ಡೂರು, ಉಂಡೆನಹಳ್ಳಿ, ಆದರಳ್ಳಿ, ಅಕ್ಕಿಗುಂದ, ಗೊಜನೂರು ಸೇರಿದಂತೆ ಅನೇಕ ಕಡೆಗಳಲ್ಲಿಯೂ ಮಳೆ ಸುರಿದಿದೆ.