ಬಸವೇಶ್ವರರು ಈ ನಾಡಿನ ಆಸ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಸವಣ್ಣನವರು ಅಂದಿನ ದಿನಗಳಲ್ಲಿ ನೀಡಿದ ಒಂದೊಂದು ವಾಕ್ಯಗಳು ಇಂದಿನ ಜಗತ್ತಿಗೆ ಹೇಳಿ ಮಾಡಿಸಿದಂತಿವೆ. ಅವರ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾಗಬೇಕಾಗಿದೆ ಎಂದು ಹಿರಿಯ ವೈದ್ಯ ಡಾ. ಶಿವಾನಂದ ಹೂವಿನ್ ಅಭಿಪ್ರಾಯಪಟ್ಟರು.

Advertisement

ಅವರು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಮಾಸದ ಮಾತು ಮಾಲಿಕೆಯ 21ನೇ ಕಾರ್ಯಕ್ರಮದಲ್ಲಿ ಉನ್ನತಿ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯಲ್ಲಿ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಸವೇಶ್ವರರು ನಾಡಿನ ಆಸ್ತಿ. ಅವರು ಯಾವುದೇ ಒಂದು ಜಾತಿ, ಮತ, ಪಂಥಕ್ಕೆ ಸೀಮಿತವಲ್ಲ. ಇಡೀ ಮನುಕುಲಕ್ಕೆ ಅವರು ದೈವಸ್ವರೂಪರಿದ್ದಂತೆ. ಬಸವಣ್ಣನವರ ವಿಚಾರಗಳು ಸೂರ್ಯ, ಚಂದ್ರ ಇರುವವರೆಗೂ ಕೂಡ ಪ್ರಸ್ತುತ. ಮನುಷ್ಯತ್ವದ ಆಧಾರದ ಮೇಲೆ ಈ ಸಮಾಜದ ಸಂಸ್ಕೃತಿ ಮತ್ತು ನಾಗರಿಕತೆ ನಿರ್ಮಾಣವಾಗಬೇಕು ಎಂಬುದು ಅವರ ಧ್ಯೇಯವಾಗಿತ್ತು ಎಂದು ಹೇಳಿದರು.

ಇನ್ನೋರ್ವ ಅತಿಥಿ ಡಾ. ನಾಗರಾಜ ವಾಲಿ ಮಾತನಾಡಿ, ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟಿದ್ದು ಬಸವೇಶ್ವರರು. ಅನುಭವ ಮಂಟಪವೇ ಇಂದಿನ ಸಂಸತ್ತಿಗೆ ಮೂಲಾಧಾರ. ಬಸವಣ್ಣನವರು ಸಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಎಂದು ಹೇಳಿದರು.

ಮಂಜುನಾಥ ಬಂಡಿವಾಡ ಮತ್ತು ಬಸವರಾಜ ಶೆಟ್ಟರ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಬಸವ ವಿಚಾರಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ. ಇಂದಿನ ಎಲ್ಲ ಸಮಸ್ಯೆಗಳಿಗೆ ಬಸವ ವಿಚಾರಗಳಲ್ಲಿ ಉತ್ತರಗಳಿವೆ. ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಬಸವಾದಿ ಶಿವಶರಣರು ಇಂದಿನ ಆದರ್ಶವಾಗಬೇಕು ಎಂದರು.

ಶಿಕ್ಷಕ ಮೃತ್ಯುಂಜಯ ಹಿರೇಮಠ ಮಾತನಾಡಿದರು. ಮುಖ್ಯ ಅತಿಥಿಗಳಾದ ಶಿಕ್ಷಕ ಸಂಗಮೇಶ ಅಂಗಡಿ, ಮಹಾದೇವ ಧರಣಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿಯರಾದ ಚಂದನಾ ಕಳಸಾಪುರ, ವಿನುತಾ ಘೋರ್ಪಡೆ, ಸುಶ್ಮಿತಾ ರೆಡ್ಡೇರ ಬಸವಣ್ಣನ ವಚನಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಐ.ಎ. ಬಳಿಗಾರ ವಂದಿಸಿದರು. ಈರಣ್ಣ ಗಾಣಿಗೇರ ಈರಣ್ಣ ರಿತ್ತಿ, ನಾಗರಾಜ ಎಂಡಿಗೇರಿ, ರಮೇಶ ಗಿಣಿ, ಕಾರ್ತಿಕ ನರೇಗಲ್ ಮುಂತಾದವರು ಹಾಜರಿದ್ದರು.

ಪ್ರಾಸ್ತಾವಿಕ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ, ಬಸವಣ್ಣ ಎಲ್ಲಾ ಕ್ಷೇತ್ರಗಳಲ್ಲಿಯೂ ಅನ್ವಯವಾಗುವ ವಚನಗಳನ್ನು ಎಲ್ಲರಿಗೂ ಪಚನವಾಗುವ ಹಾಗೆ ಸರಳ ಕನ್ನಡ ಭಾಷೆಯಲ್ಲಿ ಹೇಳಿ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಕಲ್ಪಿಸಿದರು ಎಂದರು.


Spread the love

LEAVE A REPLY

Please enter your comment!
Please enter your name here