ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಈ ಭಾಗದ ನಡೆದಾಡುವ ದೇವರು, ಪರಮ ತಪಸ್ವಿ ಲಿಂ.ವೀರಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಭೂಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಮಹೋನ್ನತ ಕಾರ್ಯ ಸಾಂಗವಾಗಿ ನೇರವೇರಲು ಲಿಂ.ಜಗದ್ಗುರುಗಳ ಆಶೀರ್ವಾದ ಕಾರಣವಾಗಿದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರಮಠದ ಡಾ. ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ನುಡಿದರು.
ಅವರು ಸೋಮವಾರ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಭೂಮಿಪೂಜೆ ನೆರವೇರಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸುಮಾರು 4 ದಶಕಗಳ ಕಾಲದ ಕನಸು ಇದೀಗ ನನಸಾಗುತ್ತಿದ್ದು, ಲಿಂ.ಜ. ವೀರಗಂಗಾಧರ ಮಹಾಸ್ವಾಮಿಗಳ ತಪೋಭೂಮಿಯಲ್ಲಿ ಲಿಂ.ಶ್ರೀಗಳ ಸತ್ಯಸಂಕಲ್ಪ ಇದೀಗ ನೆರವೇರುವ ಕಾಲ ಬಂದಿದೆ. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ವಿಶೇಷ ಆಸಕ್ತಿಯ ಫಲವಾಗಿ ಈ ಬೃಹತ್ ಕಾರ್ಯ ನೆರವೇರಲಿದೆ. ತ್ರಿಕೋಟಿ ಲಿಂಗ ಸ್ಥಾಪನೆ ಕಾರ್ಯ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಕೇವಲ ಒಂದು ವರ್ಷದೊಳಗೆ ನಡೆಯುವ ಈ ಬೃಹತ್ ಯೋಜನೆಯಿಂದ ದೇಶದ ನಕ್ಷೆಯಲ್ಲಿ ಮುಕ್ತಿಮಂದಿರ ಕ್ಷೇತ್ರವು ರಾರಾಜಿಸಲಿದೆ. ಭಕ್ತರೆಲ್ಲರೂ ಸೇರಿ ಈ ಅಭೂತಪೂರ್ವ ಕಾರ್ಯವನ್ನು ಯಶಸ್ವಿಗೊಳಿಸಿ ಲಿಂ.ಶ್ರೀಗಳ ಕೃಪೆಗೆ ಪಾತ್ರರಾಗುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಹಾಗೂ ಹುಬ್ಬಳ್ಳಿ ಸಿದ್ದಾರೂಢ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಸರ್ವಧರ್ಮ ಸಮನ್ವಯಾಚಾರ್ಯ ಲಿಂ.ಜ. ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಈ ಕ್ಷೇತ್ರದಲ್ಲಿ ಲೋಕ ಕಲ್ಯಾಣಕ್ಕಾಗಿ ತ್ರಿಕೋಟಿ ಶಿವಲಿಂಗಗಳನ್ನು ಸ್ಥಾಪಿಸಬೇಕೆನ್ನುವ ಕನಸನ್ನು ಕಂಡಿದ್ದರು. ಅವರು ಲಿಂಗೈಕ್ಯರಾದರೂ ಸಹ ತ್ರಿಕೋಟಿ ಲಿಂಗ ಸ್ಥಾಪನೆ ಕಾರ್ಯ ನಡೆದಿರುವದಕ್ಕೆ ಅವರ ತಪಃಶಕ್ತಿ ಸಾಕ್ಷಿಯಾಗಿದೆ. ತ್ರಿಕೋಟಿ ಲಿಂಗ ಸ್ಥಾಪನೆಯಾಗುತ್ತಿರುವದು ದೇಶದಲ್ಲಿಯೇ ಪ್ರಥಮ. ತಪಸ್ವಿಗಳು ಸಂಕಲ್ಪ ಮಾಡಿದಲ್ಲಿ ಅವರ ಕೃಪಾದೃಷ್ಟಿಯಿಂದ ಅಂತಹ ಕಾರ್ಯಗಳು ಸಾಂಗವಾಗಿ ನೆರವೇರುತ್ತವೆ ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆ ಆಗುತ್ತಿರುವುದು ನಮ್ಮೆಲ್ಲರ ಪುಣ್ಯ. ಶ್ರೀಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ ಹಾಗೂ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಮಾಜಿ ಶಾಸಕರುಗಳಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಈ ಬೃಹತ್ ಕಾರ್ಯಕ್ಕೆ ಸರ್ವ ರೀತಿಯಿಂದಲೂ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಲಾದಗಿ ಶ್ರೀಗಳು, ಶಂಕ್ರಣ್ಣ ಗೊರವರ, ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಪುಲಕೇಶಿ ಉಪನಾಳ, ಚನ್ನಪ್ಪ ಜಗಲಿ, ಪ್ರವೀಣ ಬಾಳಿಕಾಯಿ, ವಿರೂಪಾಕ್ಷ ಆದಿ, ರಾಜು ಕೊಟಗಿ, ಈಶ್ವರ ಬಂಡಿವಾಡ, ಮಲ್ಲಯ್ಯ ಭಕ್ತಿಮಠ, ಮ್ಯಾಕ್ಸ್ ಪ್ರಾಪರ್ಟಿಸ್ನ ರಾಜೇಶ ಡಿ, ನೊಣವಿನಕೆರೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಟೇಶ, ವ್ಯವಸ್ಥಾಪಕ ಶಂಬಣ್ಣ, ರಾಜಣ್ಣ ಕುಂಬಿ, ಜಯಕ್ಕ ಕಳ್ಳಿ, ವಾಸ್ತು ತಜ್ಞ ಪರಿಮಳಾಚಾರ್ಯ, ಎಸ್.ಎಸ್. ಹಿರೇಮಠ, ಶಿವಯ್ಯ ಸಾಲಿಮಠ, ಬಾಪು ಕೊಪ್ಪದ, ವಿರೂಪಾಕ್ಷಪ್ಪ ದೊಡ್ಡಮನಿ, ಶಿವನಾಗಯ್ಯ ಹಿರೇಮಠ, ಶಿವಣ್ಣ ಕಟಗಿ ಮುಂತಾದವರಿದ್ದರು.
ತ್ರಿಕೋಟಿ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿರುವ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರು, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಜ್ಯಾಧ್ಯಕ್ಷರು ಆಗಿರುವ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸರ್ವಧರ್ಮ ಸಮನ್ವಯಾಚಾರ್ಯ ಲಿಂ.ಜ.ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಈ ಕ್ಷೇತ್ರದಲ್ಲಿ ಲೋಕ ಕಲ್ಯಾಣಕ್ಕಾಗಿ ತ್ರಿಕೋಟಿ ಶಿವಲಿಂಗಗಳನ್ನು ಸ್ಥಾಪಿಸಬೇಕೆನ್ನುವ ಮಹೋನ್ನತ ಕಾರ್ಯ ಇದೀಗ ಸಿದ್ಧಿಸುತ್ತಿದೆ ಎಂದು ನುಡಿದರು.