ಸಂಘಟನಾ ಚತುರ, ಸ್ನೇಹಜೀವಿ ರವಿ ಗುಂಜೀಕರ

0
Spread the love

ಸ್ನೇಹಜೀವಿ, ಸಂಘಟನಾ ಚತುರ, ಸಮರ್ಥ ಆಡಳಿತಗಾರ, ಅಭಿವೃದ್ಧಿಯ ಕನಸುಗಾರ, ವೃತ್ತಿ ಮತ್ತು ಸಂಘಟನೆಯಲ್ಲಿ ಸಮನ್ವಯತೆ ಮೈಗೂಡಿಸಿಕೊಂಡ, ಹೋರಾಟದ ನೆಲೆಗಟ್ಟಿನ ಪರಿಸದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ವೃತ್ತಿ, ಸಂಘಟನೆ ಮತ್ತು ಬದುಕಿನಲ್ಲಿ ಸಾರ್ಥಕ 60 ಸಂವತ್ಸರ ಪೂರೈಸಿ ವಯೋಸಹಜ ಸೇವಾ ನಿವೃತ್ತಿ ಹೊಂದಿದ ಡಾ. ರವಿ ಎಲ್. ಗುಂಜೀಕರ ಅವರ ಅಭಿನಂದನಾ ಸಮಾರಂಭವನ್ನು ಅವರ ಅಭಿಮಾನಿ ಬಳಗ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಜಿಲ್ಲೆಯ ವಿವಿಧ ವೃಂದ ಸಂಘಗಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕುಟುಂಬ ವರ್ಗದವರೆಲ್ಲ ಸೇರಿಕೊಂಡು ವಿಧಾಯಕ ಮತ್ತು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ವಿಭಿನ್ನ ರೂಪದಲ್ಲಿ ಅಯೋಜನೆಗೊಂಡು ಜನರ ಗಮನ ಕೇಂದ್ರೀಕರಿಸಿದೆ.

Advertisement

ಜಿಲ್ಲೆಯ ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಮತ್ತು ವಿಶ್ವನಾಥ ಕಮ್ಮಾರ, ಡಾ. ಬಸವರಾಜ ವಿ.ಬಳ್ಳಾರಿ ಇವರ ಸಂಪಾದಕತ್ವದಲ್ಲಿ `ನೌಕರರ ನಾವಿಕ’ ಅಭಿನಂದನಾ ಗ್ರಂಥ ಪ್ರಕಟಣೆ, ಬಸವ ಜಯಂತುತ್ಸವ, 60 ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವದ ಅರ್ಥಪೂರ್ಣ ದಿನಾಚರಣೆಯಲ್ಲಿ ಸಾಲುಮರದ ತಿಮ್ಮಕ್ಕಳಿಗೆ ಗೌರವ, ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ 60 ಪೌರ ಕಾರ್ಮಿಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ-ಸನ್ಮಾನ, ಅಭಿಮಾನಿ ಬಳಗದ 60 ಸದಸ್ಯರು ಮತ್ತು ಶಿಷ್ಯರಿಂದ ರಕ್ತದಾನ ಶಿಬಿರ, ವಿವಿಧ ಇಲಾಖೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿರುವ ಮಹಿಳಾ ನೌಕರರನ್ನು ಸನ್ಮಾನಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಜಿಲ್ಲಾಸ್ಪತ್ರೆಯ 60 ರೋಗಿಗಳಿಗೆ ಮತ್ತು ಬುದ್ಧಿಮಾಂದ್ಯ ಮಕ್ಕಳಗೆ ಹಣ್ಣು-ಹಾಲು ವಿತರಣೆ, ತಾವು ಕಲಿತ ಗದಗ ಶಹರದ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ನಂ-2 ದತ್ತು ಸ್ವೀಕಾರ, ಬೀದಿ ಚಹಾದಂಗಡಿ ಮಾಲಿಕ, ನೀರಗಂಟಿ, ಮಹಿಳಾ ಚಾಲಕಿ, ಅಸ್ಪತ್ರೆಯ ಕ್ಲೀನರ್, ಕೂಲಿ, ತರಕಾರಿ ಮಾರುವವರು, ಶವಾಗಾರ ಕಾರ್ಮಿಕ, ದೇಶಕಾಯುವ ಸೈನಿಕ, ಅನ್ನ ನೀಡಯವ ಸಾವಯವ ಕೃಷಿಕ ಹೀಗೆ ನಿತ್ಯ ತಮ್ಮ ಜೀವನೋಪಾಯ ವೃತ್ತಿ ಬದುಕಿನಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಎಲೆಮರೆ ಕಾಯಿಯಾಗಿರುವ 60 ಜನ ಕೆಲಸಗಾರರನ್ನು ಅಭಿನಂದಿಸುವ ಮೂಲಕ ಗದಗ ಪರಿಸರದಲ್ಲಿ ಹೊಸ ಚರಿತ್ರೆಗೆ ಭಾಷ್ಯ ಬರೆಯುತ್ತಿದೆ ಈ ಕಾರ್ಯಕ್ರಮ.

ರವಿ ಗುಂಜೀಕರರು 1965 ಎಪ್ರಿಲ್ 4ರಂದು ಬೆಳಗಾವಿ ನಗರದ ಬಾಸಬಾಗನಲ್ಲಿ ಲಕ್ಷö್ಮಣ ಹಾಗೂ ಪಾರ್ವತಮ್ಮ ಅವರ ಪುಣ್ಯಗರ್ಭದಲ್ಲಿ ಪ್ರೀತಿಯ ಮಗನಾಗಿ ಜನಿಸಿದರು. ಇವರ ತಂದೆ ಲಕ್ಷ್ಮಣರವರು ಕೇಂದ್ರ ಸರಕಾರದ ಅಂಚೆ ಇಲಾಖೆಯ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜಶಾಸ್ತç ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಇವರು 1985ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರೋಣ ತಾಲೂಕಿನ ಹಿರೇಹಾಳ ವಸತಿ ನಿಲಯ ಪಾಲಕರಾಗಿ ತಮ್ಮ ಸರಕಾರಿ ಸೇವೆ ಪ್ರಾರಂಭಸಿದರು. 1992ರಲ್ಲಿ ಸವದತ್ತಿ ವಸತಿ ನಿಲಯಕ್ಕೆ ವರ್ಗಾವಣೆಗೊಂಡು 5 ವರ್ಷಗಳ ಕಾಲ ಕೆಲಸ ಮಾಡಿ, 1998ರಲ್ಲಿ ಗದಗ ಜಿ.ಪಂ ಜಲನಿರ್ಮಾಣ ಯೋಜನೆ ವಿಭಾಗದಲ್ಲಿ ಅಧೀಕ್ಷರಾಗಿ, 2009ರಲ್ಲಿ ಗದಗ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಕಲ್ಯಾಣಾಧಿಕಾರಿಯಾಗಿ ಮತ್ತು 2006ರಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರಾಗಿ ವಿಶಿಷ್ಠ ಸೇವೆಯನ್ನು ಸಲ್ಲಿಸಿದ್ದಾರೆ.

2012ರಿಂದ ಗದಗ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ 2020ರಿಂದ ವಕ್ಫ್ ಹಿಂದುಳಿದ ಅಲ್ಪ ಸಂಖ್ಯಾತ ಇಲಾಖೆ-ಸಮುದಾಯ ಕಲ್ಯಾಣ ಇಲಾಖೆಯಿಂದ ಕಾರ್ಯ ಮಾಡಲು ಪ್ರಾರಂಭಿಸಿದಾಗ ಗದಗ ಜಿಲ್ಲಾ ಶಾಖೆಯ ಜಿಲ್ಲಾ ಅಧಿಕಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ ನೂತನ ಮೌಲಾನ ಭವನ ನಿರ್ಮಾಣ, ಅಲ್ಪ ಸಂಖ್ಯಾತ ಸಮುದಾಯದ ಎಲ್ಲಾ ಕೆಲಸಗಳು ಒಂದೇ ಸೂರಿನಡಿ ಸಂಪನ್ನಗೊಳ್ಳಲು ಕಾರ್ಯ ಕೈಗೊಂಡರು. 2022ರಲ್ಲಿ ಪದೋನ್ನತಿ ಹೊಂದಿ ಗದಗ ಜಿಲ್ಲಾ ಹಿಂದುಳಿದ ಇಲಾಖೆಯ ಉಪನಿರ್ದೇಶಕರಾಗಿ ಇಲಾಖೆಯ ಘನತೆಗೆ ಚ್ಯುತಿ ಬಾರದಂತೆ ಪ್ರಾಮಾಣಿಕತೆ ಮತ್ತು ಸಮನ್ವಯತೆಯಿಂದ ಕೆಲಸ ಮಾಡಿ ಎಪ್ರಿಲ್ 30ರಂದು ಸೇವಾ ನಿವೃತ್ತಿ ಹೊಂದಿದರು.

2006ರ ನಂತರ ನೇಮಕಗೊಂಡ ನೌಕರರಿಗೆ ಜಾರಿಯಲ್ಲಿರುವ ಎನ್.ಪಿ.ಎಸ್. ಪದ್ಧತಿ ರದ್ದುಗೊಳಿಸಿ ಹಳೆ ಓಪಿಸಿ ಪದ್ಧತಿ ಜಾರಿಗೊಳಿಸುವಂತೆ ಮಾಡುವ ಹೋರಾಟದಲ್ಲಿ `ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ವಿನೂತನ ಹೋರಾಟದ ಮೂಲಕ ಸರಕಾರ ಗಮನ ಸೆಳೆಯುವಲ್ಲಿ ಇವರ ಸಂಘಟನಾ ಶಕ್ತಿ ಅನುಕರಣೀಯ.

ಪ್ರತಿವರ್ಷ ಸರಕಾರಿ ನೌಕರರಿಗೆ ಏರ್ಪಡಿಸುವ ಕ್ರೀಡಾಕೂಟವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ವಿಜೇತ ಸ್ಪರ್ಧಾಳುಗಳು ಹಾಗೂ ತಂಡಗಳನ್ನು ಬಹಳಷ್ಟು ರಚನಾತ್ಮಕವಾಗಿ ರೂಪಿಸಿಕೊಂಡು ರಾಜ್ಯಮಟ್ಟದಲ್ಲಿ ಭಾಗವಹಿಸುವಂತಹ ಇವರ ಕ್ರಿಯಾತ್ಮಕ ವಿಚಾರಗಳು ಸಂಘದ ಕ್ರಿಯಾಶೀಲತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಶಿಕ್ಷಕರ ವರ್ಗಾವಣೆ ತಕ್ಷಣ ಪ್ರಾರಂಭಿಸುವ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿಯ ಕುರಿತು ಹಕ್ಕೊತ್ತಾಯವನ್ನು ಗಟ್ಟಿಧ್ವನಿಯಲ್ಲಿ ಸರಕಾರದ ಗಮನ ಸೆಳೆದಿದ್ದಾರೆ.

ಜಿಲ್ಲೆಯಲ್ಲಿ ಸಂಘವು ಸ್ವಂತ ನಿವೇಶನ, ಸುಸಜ್ಜಿತ ಸಮುದಾಯ ಭವನ ನಿರ್ಮಾಣ, ಸಂಘದ ಆವರಣದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರಾದ ಡಾ. ಪಂಡಿತ ಪುಟ್ಟರಾಜರವರ ಮೂರ್ತಿ ಹಾಗೂ ದೇವನಸ್ಥಾನ ನಿರ್ಮಾಣದಲ್ಲಿ ಹಿಂದಿನ ಅಧ್ಯಕ್ಷರಾದ ಪ್ರೇಮನಾಥ ಜಿ.ಗರಗ ಹಾಗೂ ಅವರೆಲ್ಲ ಪದಾಧಿಕಾರಿಗಳ ಕಾರ್ಯದಲ್ಲಿ ಇವರ ಪರಿಶ್ರಮ ಸಹ ಅಷ್ಟೇ ಪ್ರಾಮುಖ್ಯವಾಗಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಇವರ ಕ್ರಿಯಾಶೀಲ ವ್ಯಕ್ತಿತ್ವ ಅವಲೋಕಿಸಿದ ರಾಜ್ಯ ಸಂಘದ ಅಧ್ಯಕ್ಷರಾದ ಡಾ. ಷಡಾಕ್ಷರಿಯವರು ಗುಂಜೀಕರರನ್ನು 2019ರಲ್ಲಿ ಕೇಂದ್ರ ಸಂಘದ ಉಪಾಧ್ಯಕರನ್ನಾಗಿ, 2024ರಲ್ಲಿ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದರು. ಹೊಣೆಗಾರಿಕೆ, ಜವಾಬ್ದಾರಿ ನಿರ್ವಹಣೆ ಮೂಲಕ ಅವರ ಆಪ್ತ ಸಹವರ್ತಿಯಾದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯದ ಘಟಕದ ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ತಮ್ಮೆಲ್ಲಾ ಸಾಧನೆಗಳು ಹಾಗೂ ಪ್ರಗತಿಯ ಕುರಿತು ಚರ್ಚಿಸುವ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುವವರನ್ನು ಸದಾ ಮುಕ್ತ ಕಂಠದಿಂದ ಅಭಿಮಾನಿಸುವ ಸ್ವಭಾವ ಇವರ ಹೃದಯ ವೈಶಾಲ್ಯತೆಗೊಂದು ನಿದರ್ಶನವಾಗಿದೆ.

ವಿಶ್ವನಾಥ ಯ.ಕಮ್ಮಾರ.

ಅಧ್ಯಾಪಕರು, ಗದಗ.


Spread the love

LEAVE A REPLY

Please enter your comment!
Please enter your name here