ವಿಜಯಸಾಕ್ಷಿ ಸುದ್ದಿ, ಗದಗ: ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದರವನ್ನು ಎಪ್ರಿಲ್ 1ರಿಂದ 370 ರೂ.ಗೆ ಏರಿಕೆ ಮಾಡಲಾಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಡಿ ದುಡಿಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಹಾಯಕ ನಿರ್ದೇಶಕರಾದ (ಉಖಾ) ಕುಮಾರ ಪೂಜಾರ ಸಲಹೆ ನೀಡಿದರು.
ಸೋಮವಾರ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನದ ನಿಮಿತ್ತ ಮಹಿಳಾ ಕೂಲಿಕಾರರ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿಯಲ್ಲಿ ಶೇ.50ರಷ್ಟಿರುವ ಮಹಿಳಾ ಕೂಲಿಕಾರ್ಮಿಕರ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ. ಮಹಿಳಾ ಸಬಲೀಕರಣವನ್ನು ನರೇಗಾ ಯೋಜನೆ ಮೂಲಕ ಕೈಗೊಳ್ಳುವುದು ಅಭಿಯಾನದ ಉದ್ದೇಶವಾಗಿದೆ. ಮಹಿಳೆಯರ ಅನಕೂಲಕ್ಕಾಗಿ ಕೂಸಿನ ಮನೆಯನ್ನು ತೆರೆಯಲಾಗಿದ್ದು, ಮೂರು ವರ್ಷದೊಳಗಿನ ಮಕ್ಕಳನ್ನು ಅಲ್ಲಿಗೆ ಸೇರಿಸಬಹುದಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಒಟ್ಟಾಗಿ ಸೇರುವ ಪ್ರಯತ್ನವಾಗುತ್ತಿದೆ. ಇದೇ ಮಾದರಿಯಲ್ಲಿ ಮಹಿಳೆಯರೆಲ್ಲರೂ ಒಟ್ಟಾಗಿ ಸೇರಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಪಡೆದುಕೊಂಡು ಗ್ರಾಮೀಣ ಸಮುದಾಯ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ಕೂಸಿನ ಮನೆಗೆ ಭೇಟಿ ನೀಡಿ ಆರೈಕೆದಾರರಿಗೆ ಮತ್ತು ಪಿಡಿಒ ಅವರಿಗೆ ಅಗತ್ಯ ಸಲಹೆ ಸೂಚನೆ ನೀಡಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಿವಲೀಲಾ ಗೂಳಪ್ಪನವರ, ತಾಲೂಕು ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಟಿಎಇ ನವೀನ ಬಸರಿ, ಬಿಎಫ್ಟಿ ಮೈಲಾರಪ್ಪ ಸೋಮನಕಟ್ಟಿ, ಜಿಕೆಎಂ ಪವಿತ್ರಾ ಯತ್ನಟ್ಟಿ, ಕಾಯಕ ಬಂಧುಗಳು ಇದ್ದರು.