ವಿಜಯಸಾಕ್ಷಿ ಸುದ್ದಿ, ಮುಂಡರಗಿ: ನರೇಗಾ ಕೂಲಿ ಮೊತ್ತ 370 ರೂ.ಗಳಿಗೆ ಹೆಚ್ಚಳವಾಗಿದ್ದು, ಗ್ರಾಮೀಣ ಭಾಗದ ಅಕುಶಲ ಕೂಲಿ ಕಾರ್ಮಿಕರು ಆರ್ಥಿಕವಾಗಿ ಸದೃಢರಾಗಲು ಕಾರಣವಾಗಿದೆ ಎಂದು ತಾ.ಪಂ ಇಓ ವಿಶ್ವನಾಥ ಹೊಸಮನಿ ಹೇಳಿದರು.
ತಾಲೂಕಿನ ಡೋಣಿ ಗ್ರಾ.ಪಂ ಕಚೇರಿಯಲ್ಲಿ `ದುಡಿಯೋಣ ಬಾ‘ ಅಭಿಯಾನದ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಕೆಲಸದ ಕೊರತೆ ಗ್ರಾಮೀಣ ಭಾಗದ ಜನರನ್ನು ಭಾದಿಸುತ್ತಿರುತ್ತದೆ. ಆ ಕೊರತೆ ನೀಗಿಸಲು ನರೇಗಾ ಯೋಜನೆಯನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನರೇಗಾ ಕಾಮಗಾರಿಗಳಲ್ಲಿ ಎನ್ಎಂಎಂಎಸ್ ಆ್ಯಪ್ ಮೂಲಕ ಎರಡು ಬಾರಿ ಹಾಜರಾತಿ ಕಡ್ಡಾಯವಾಗಿದ್ದು, ಈ ವಿಧಾನದಿಂದ ಮಾತ್ರ ಕೂಲಿಕಾರರಿಗೆ ಕೂಲಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ನಿರುದ್ಯೋಗ ಹಾಗೂ ಆರ್ಥಿಕ ಸಂಕೋಲೆಯಿಂದ ತತ್ತರಿಸುವ ಬಡವರಿಗೆ ಈ ಅಭಿಯಾನ ಸಹಕಾರಿ ಎಂದರು.
ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದ್ದು, ಅಷ್ಟು ದಿನ ಕೂಲಿಕಾರರಾಗಿ ಭಾಗವಹಿಸಿ ಯೋಜನೆಯ ಸಂಪೂರ್ಣ ಲಾಭ ಪಡೆದರೆ 37000 ರೂಪಾಯಿ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಗ್ರಾಮೀಣ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ, ಬದು ಮುಂತಾದ ಕೃಷಿ ಚಟುವಟಿಕೆ ಜೊತೆಗೆ ಕೆರೆ ಹೂಳೆತ್ತುವುದು, ಜಲಮೂಲಗಳ ದಡದಲ್ಲಿ ಅರಣ್ಯೀಕರಣ, ನೆಡುತೋಪು ನಿರ್ಮಾಣ, ಕಾಲುವೆಗಳ ಪುನಶ್ಚೇತನ ಮುಂತಾದ ಕಾರ್ಯಗಳಿಗೆ ಅವಕಾಶವಿದೆ. ಹಾಗಾಗಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಭಿಯಾನವನ್ನು ಯಶಗೊಳಿಸಲು ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.
ಈ ವೇಳೆ ಸಹಾಯಕ ಕೃಷಿ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ, ಪಿಡಿಓ ಪಾರ್ವತಿ ಹೊಂಬಳ, ಗ್ರಾ.ಪಂ ಸದಸ್ಯರು, ಬಿಎಫ್ಟಿ, ಜಿಕೆಎಂ, ಕಾಯಕ ಬಂಧುಗಳು ಹಾಗೂ ಸಾರ್ವಜನಿಕರು ಇದ್ದರು.
ಜಾಬ್ ಕಾರ್ಡ್ ಇಲ್ಲದ ದುರ್ಬಲ ವರ್ಗದವರಿಂದ ಅಗತ್ಯ ದಾಖಲೆ ಪಡೆದು ಉದ್ಯೋಗ ಚೀಟಿ ನೀಡುವುದು, ಕೆಲಸದ ಬೇಡಿಕೆ ಪಡೆಯುವ ಕಾರ್ಯವನ್ನು ತಾಲೂಕಿನ ಸಂಬಂಧಿಸಿದ ನರೇಗಾ ಸಿಬ್ಬಂದಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ವಿಶ್ವನಾಥ ಹೊಸಮನಿ ಮಾಹಿತಿ ನೀಡಿದರು.