ವಿಜಯಸಾಕ್ಷಿ ಸುದ್ದಿ, ಗದಗ: 2025ನೇ ಸಾಲಿನ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ರಾಜ್ಯ ಸರಕಾರಿ ನೌಕರ ಸಂಘದ ಗದಗ ಜಿಲ್ಲಾಧ್ಯಕ್ಷರಾದ ಡಾ. ಬಸವರಾಜ ಬಳ್ಳಾರಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 2025ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಯಸುವ ಪ್ರತಿಭಾವಂತ ವಿದ್ಯಾರ್ಥಿಗಳು ಜಾಲತಾಣಕ್ಕೆ ಭೇಟಿ ನೀಡಬಹುದು. ಈ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 2025ನೇ ಸಾಲಿನಲ್ಲಿ ಪಿಯುಸಿ ಅಥವಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿರಬೇಕು, ತಂದೆ/ತಾಯಿ ರಾಜ್ಯ ಸರಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರಕಾರಿ ನೌಕರರಾಗಿರಬೇಕು. ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿಯನ್ನು ಸಲ್ಲಿಸುವಂತಿಲ್ಲ.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮತ್ತು ದೃಢೀಕೃತ ಅಂಕಪಟ್ಟಿ, ಇಲಾಖೆಯ ಸೇವಾ ದೃಢೀಕರಣ ಪತ್ರ, ಸರಕಾರಿ ನೌಕರ ಸಂಘದ ಜಿಲ್ಲಾ/ ತಾಲೂಕು/ಯೋಜನಾ ಶಾಖೆ ಅಧ್ಯಕ್ಷರು/ಬೆಂಗಳೂರು ನಗರರಾಜ್ಯ ಪರಿಷತ್ ಸದಸ್ಯರಿಂದ ಪಡೆದ ದೃಢೀಕರಣ ಪತ್ರಗಳನ್ನು ನಿಗದಿತ ಜೆಪಿಜಿ ಫಾರ್ಮೇಟ್ನಲ್ಲಿ ಅಪ್ಲೋಡ್ ಮಾಡಬೇಕು. ಅರ್ಜಿ ಸಲ್ಲಿಕೆ ಯಶಸ್ವಿಗೊಂಡ ನಂತರ ನೊಂದಾಯಿತ ಇ-ಮೇಲ್ಗೆ ಸ್ವೀಕೃತಿ ರವಾನೆಯಾಗಲಿದೆ. ಶೇಕಡಾವಾರು ಅಂಕಗಳನ್ನು ನಿರ್ಧರಿಸಿ ಅರ್ಜಿಯನ್ನು ಪರಿಗಣಿಸುವ ನಿರ್ಧಾರ ಸಂಘದ್ದಾಗಿರುತ್ತದೆ. ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆಯ ಒಳಗಾಗಿ 080-223547784/83 ಸಂಖ್ಯೆಗೆ ಸಂಪರ್ಕಿಸುವಂತೆ ಡಾ. ಬಸವರಾಜ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.