ವಿಜಯಸಾಕ್ಷಿ ಸುದ್ದಿ, ರೋಣ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಮೇ. 20ರಂದು ಎರಡು ವರ್ಷ ಪೂರೈಸಲಿದ್ದು, ಹೊಸಪೇಟೆಯಲ್ಲಿ ನಡೆಯುವ `ಸಾಧನಾ ಸಮಾವೇಶ’ದಲ್ಲಿ ಮತಕ್ಷೇತ್ರದಿಂದ 20 ಸಾವಿರಕ್ಕೂ ಹೆಚ್ಚು ಫಲಾನುಭವಿಗಗಳು ಭಾಗವಹಿಸಲಿದ್ದಾರೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ಸಾಧನಾ ಸಮಾವೇಶದ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಲಾಭವನ್ನು 1 ಕೋಟಿ 10 ಲಕ್ಷ ಕುಟುಂಬಗಳು ಪಡೆಯುತ್ತಿವೆ. ಇದು ಸಾಮಾನ್ಯ ಕೆಲಸವಲ್ಲ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ. ಮುಖ್ಯವಾಗಿ ಎರಡು ವರ್ಷದ ಸಮಾವೇಶದಲ್ಲಿ ಲಕ್ಷ ಫಲಾನುಭವಿಗಳಿಗೆ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಲಾಭವನ್ನು ತಲುಪಿಸಲಿದೆ ಎಂದರು.
ಪಕ್ಷದ ಕಾರ್ಯಕರ್ತರು ಗ್ಯಾರಂಟಿ ಯೋಜನೆಗಳ ಲಾಭಗಳ ಕುರಿತು ಜನರಿಗೆ ಮನವರಿಕೆ ಮಾಡಬೇಕು. ಅಲ್ಲದೆ ಗೃಹಲಕ್ಷ್ಮೀಯಂತಹ ಮಹತ್ವದ ಯೋಜನೆಯಿಂದ ಇಂದು ಲಕ್ಷಾಂತರ ಕುಟುಂಬಗಳು ಆರ್ಥಿಕ ಶಕ್ತಿಯನ್ನು ಪಡೆದುಕೊಂಡಿವೆ. ಗ್ಯಾರಂಟಿ ಯೋಜನೆಗಳಿಂದ ಕುಟುಂಬಕ್ಕೆ ಪ್ರತಿ ತಿಂಗಳು 5ರಿಂದ 6 ಸಾವಿರ ರೂ ಉಳಿತಾಯವಾಗುತ್ತಿದೆ. ಅನೇಕ ಕುಟುಂಬಗಳು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಶೀಘ್ರದಲ್ಲಿಯೇ ತಾ.ಪಂ ಹಾಗೂ ಜಿ.ಪಂ ಚುನಾವಣೆ ಘೋಷಣೆಯಾಗುವ ಲಕ್ಷಣಗಳಿದ್ದು, ಮನೆಮನೆಗೆ ತೆರಳಿ ಕಾಂಗ್ರೆಸ್ ನೇತೃತ್ವದ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಐ.ಎಸ್. ಪಾಟೀಲ, ವೀರಣ್ಣ ಶೆಟ್ಟರ, ಶರಣಗೌಡ ಪಾಟೀಲ, ರಮೇಶ ಪಲ್ಲೇದ, ಸಿದ್ದಣ್ಣ ಬಂಡಿ, ವಿ.ಆರ್. ಗುಡಿಸಾಗರ, ಎಚ್.ಎಸ್. ಸೋಂಪುರ, ಶಫೀಕ ಮೂಗನೂರ, ಪರಶುರಾಮ ಅಳಗವಾಡಿ, ಅಂದಪ್ಪ ಬಿಚ್ಚೂರ, ಆನಂದ ಚಂಗಳಿ, ಅಸ್ಲಂ ಕೊಪ್ಪಳ, ಸಂಜಯ ದೊಡ್ಡಮನಿ, ಮಂಜುಳಾ ರೇವಡಿ, ನಾಜಬೇಗಂ ಯಲಿಗಾರ ಸೇರಿದಂತೆ ಅನೇಕ ಮುಖಂಡರುಗಳಿದ್ದರು.
ಇದಕ್ಕೂ ಮುನ್ನ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ತಹಸೀಲ್ದಾರ ನಾಗರಾಜ ಕೆ ಹಾಗೂ ಕಿರಣಕುಮಾರ ಸಮಾವೇಶದ ಸಿದ್ಧತೆ ಹಾಗೂ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆದುಕೊಂಡು ಹೋಗುವ ಕುರಿತು ಶಾಸಕ ಜಿ.ಎಸ್. ಪಾಟೀಲರಿಗೆ ಮಾಹಿತಿ ನಿಡಿದರು. ಕಾರ್ಯಕ್ರಮದ ಯಶಸ್ವಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, 65 ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


