75ರ ವಸಂತದಲ್ಲಿ ಜಿ.ಎಸ್. ಗಡ್ಡದೇವರಮಠ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜಕಾರದಲ್ಲಿ ಅನೇಕ ಮುಖಂಡರು ತಮ್ಮದೇ ಆದ ವರ್ಚಸ್ಸು, ಜಾಣ್ಮೆ, ಜನಹಿತ ಕಾರ್ಯಗಳು ಇತ್ಯಾದಿಗಳಿಂದ ಹೆಸರು ಸಂಪಾದಿಸಿರುತ್ತಾರೆ. ಗದಗ ಜಿಲ್ಲೆಯ ರಾಜಕಾರಣದಲ್ಲಿಯೂ ಸಹ ಎಲ್ಲ ಪಕ್ಷಗಳ ಅನೇಕ ಮಹನೀಯರು ವಿಶೇಷ ಹೆಸರು ಮಾಡಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅಂತವರ ಸಾಲಿನಲ್ಲಿ ಶಿರಹಟ್ಟಿ ಮತಕ್ಷೇತ್ರದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಓರ್ವರು.

Advertisement

ಶಿರಹಟ್ಟಿ ಕ್ಷೇತ್ರಕ್ಕೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿರುವ ಜಿ.ಎಸ್. ಗಡ್ಡದೇವರಮಠ ಅವರು ಕಾನೂನು ಪದವಿ ಪಡೆದಿದ್ದರೂ ಸಹ ವಕೀಲಿ ವೃತ್ತಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳದೆ, ಕೃಷಿಯತ್ತ ತಮ್ಮ ನೋಟವನ್ನು ಹರಿಸಿದರು. ನಂತರ 1978ರಲ್ಲಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ ಇವರು ಅಲ್ಲಿಂದ ಹಿಂತಿರುಗಿ ನೋಡಿದ್ದಿಲ್ಲ. ತಮ್ಮ ಪ್ರಾಮಾಣಿಕತೆ, ಜನಪರ ಕಾಳಜಿ ಮೂಲಕ ಜನರ ಮನಸ್ಸನ್ನು ಗೆದ್ದು ಸಜ್ಜನ ರಾಜಕಾರಣಿ ಎನ್ನುವ ಹೆಸರಿಗೆ ಪಾತ್ರರಾದರು.

ನಂತರ ಮತ್ತೊಂದು ಅವಧಿಗೆ ಪುರಸಭೆಗೆ ಆಯ್ಕೆಯಾಗಿ ಊರಿನ ಪ್ರಥಮ ಪ್ರಜೆ(ಪುರಸಭಾಧ್ಯಕ್ಷ)ಯಾದರು. ಸಜ್ಜನಿಕೆ ಮತ್ತು ಮೌಲ್ಯಯುತ ರಾಜಕಾರಣ ಅವರನ್ನು ಬಿಡದೆ 1999ರಲ್ಲಿ ಶಿರಹಟ್ಟಿ ಮತಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವಂತೆ ಮಾಡಿ ಅಲ್ಲಿ ವಿಜೇತರಾಗುವ ಮೂಲಕ ಪ್ರಥಮ ಬಾರಿಗೆ ಶಾಸಕರಾದರು. 2004ರಲ್ಲಿ ನಡೆದ ಚುನಾವಣೆಯಲ್ಲಿಯೂ ಮರು ಆಯ್ಕೆಯಾಗಿ ಎರಡನೇ ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದರು.

ಇಂತಹ ಅಪರೂಪದ ವ್ಯಕ್ತಿತ್ವ ಹೊಂದಿರುವ ಜಿ.ಎಸ್. ಗಡ್ಡದೇವರಮಠ ಅವರು 75ನೇ ವಸಂತಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಅವರ ಹುಟ್ಟುಹಬ್ಬವನ್ನು ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ಆಚರಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದು, ಇದೊಂದು ಮಾದರಿ ಕಾರ್ಯಕ್ರಮವಾಗಲಿದೆ. ದಿ.30ರಂದು ಶುಕ್ರವಾರ ಪಟ್ಟಣದ ಚನ್ನಮ್ಮನವನ ಕಲ್ಯಾಣಮಂಟಪದಲ್ಲಿ ಮುಂಜಾನೆ 10 ಗಂಟೆಗೆ ಬಾಳೆಹೊನ್ನೂರು ರಂಭಾಪುರಿ ವೀರಸಿಂಹಾಸನಾಧೀಶ್ವರ ಜ.ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನಾಡಿನ ಅನೇಕ ಮುಖಂಡರ ಸಮ್ಮುಖದಲ್ಲಿ `ದೇಶದ ಸಿಂಧೂರ ಕಾಯುತ್ತಿರುವ ವೀರಯೋಧರ ಕುಟುಂಬದವರಿಗೆ ಗೌರವ ಸನ್ಮಾನ ಸಮರ್ಪಣೆ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

ತಮ್ಮ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಚಿಂತಿಸುತ್ತಿದ್ದ ಇವರು ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತಂದು ಆಧುನಿಕ ಭಗೀರಥ ಎಂಬ ಖ್ಯಾತಿಗೆ ಪಾತ್ರರಾದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ, ಲಕ್ಷ್ಮೇಶ್ವರ ತಾಲೂಕು ರಚನೆಯಲ್ಲಿ ಮಹತ್ವ ಪಾತ್ರ ವಹಿಸಿದ್ದರು. ಕ್ಷೇತ್ರ ವ್ಯಾಪ್ತಿಯಲ್ಲಿ ಜನಪರ ಕೆಲಸಗಳ ಮೂಲಕ ಕ್ಷೇತ್ರ ಅಭ್ಯುದಯಕ್ಕೆ ಶ್ರಮಿಸಿದ ಶಾಸಕರಲ್ಲಿ ಇವರು ಓರ್ವರಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here