ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಹೊಸ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರವಾದ 5 ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಎಲ್ಲಾ ಬಡವರಿಗೆ, ಸ್ತ್ರೀಯರಿಗೆ, ಅಶಕ್ತ ಸಮುದಾಯಗಳಿಗೆ ರಾಜ್ಯದ ಸಂಪನ್ಮೂಲದಲ್ಲಿ ಹಂಚಿಕೆ ಮಾಡುವ ಮುಖಾಂತರ ಹೊಸ ಇತಿಹಾಸ ನಿರ್ಮಾಣ ಮಾಡುತ್ತಿದೆ. ಅಂತೆಯೇ, ರಾಜ್ಯ ಸರ್ಕಾರ ಘೋಷಿಸಿರುವ 6ನೇ ಗ್ಯಾರಂಟಿ ಯೋಜನೆಡಿಯ ಭೂಮಿ ಹಕ್ಕನ್ನು ರಾಜ್ಯದ ಸ್ಲಂ ನಿವಾಸಿಗಳಿಗೆ ಖಾತ್ರಿಗೊಳಿಸಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ನೀಡಿ ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ಮಂಗಳವಾರ ಲಕ್ಕುಂಡಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಚುನಾವಣಾ ಪೂರ್ವದಲ್ಲಿ ಸ್ಲಂ ನಿವಾಸಿಗಳಿಗೆ ನೀಡಿರುವ ಭರವಸೆಯನ್ನು ಈಡೇರಿಸಬೇಕು. ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸ್ಲಂ ಪ್ರದೇಶಗಳಿಗೆ ಶ್ರಮಿಕ ನಿವಾಸ ಪ್ರದೇಶ ಎನ್ನುವ ನಾಮಕರಣ ಮಾಡಿ ವಸತಿ ಯೋಜನೆ ಹಾಗೂ ಹಕ್ಕುಪತ್ರ ವಿತರಣೆ ಮಾಡುವ ಭರವಸೆ ನೀಡಲಾಗಿದೆ. ಹಾಗಾಗಿ ಇತರೆ ರಾಜ್ಯಗಳಲ್ಲಿರುವಂತೆ ನಗರಾಭಿವೃದ್ಧಿ ಭಾಗವಾಗಿರುವ ಕೊಳಚೆ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರತ್ಯೇಕ ಸಚಿವರು ಮತ್ತು ಇಲಾಖೆಯನ್ನು ರಚಿಸಬೇಕು.
ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಹಲವು ವರ್ಷಗಳಿಂದ ವಸತಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗದಗ-ಬೆಟಗೇರಿ ನಗರದ ವಸತಿರಹಿತ ಕುಟುಂಬಗಳಿಗೆ ಶಿಘ್ರವೇ ಮನೆಗಳನ್ನು ಹಂಚಿಕೆ ಮಾಡಬೇಕು, ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಡಿಯಲ್ಲಿ ಗದಗ-ಬೆಟಗೇರಿ ನಗರಕ್ಕೆ ಮಂಜೂರು ಆಗಿರುವ 863 ಮನೆಗಳನ್ನು ಪೂರ್ಣವಾಗಿ ನಿರ್ಮಿಸದೇ ಹಾಗೂ ಅರ್ಹ ಸ್ಲಂ ಪ್ರದೇಶಗಳ ಕುಟುಂಬಗಳಿಗೆ ಮನೆಗಳನ್ನು ಮಂಜೂರು ಮಾಡದೇ ಸ್ಥಳೀಯ ಸ್ಲಂ ನಿವಾಸಿಗಳಿಗೆ ಅನ್ಯಾಯ ಮಾಡಲಾಗಿದ್ದು, ಸ್ಲಂ ಬೋರ್ಡ ಅಧಿಕಾರಿಗಳು ಸರ್ಕಾರದ ವಸತಿ ಯೋಜನೆಗೆ ನೈಜ್ ಫಲಾನುಭವಿಗಳನ್ನು ಆಯ್ಕೆ ಮಾಡದೇ ಸ್ಥಿತಿವಂತರಿಗೆ ಮನೆಗಳನ್ನು ನಿರ್ಮಾಣ ಮಾಡಿದ್ದರಿಂದ ಸಾಕಷ್ಟು ಭ್ರಷ್ಟಾಚಾರವನ್ನು ನಡೆಸಲಾಗಿದೆ. ಇದನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮನವಿ ಮುಖಾಂತರ ಆಗ್ರಹಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ರೇಷ್ಮಾ ಢಾಲಾಯತ, ಶರಣಪ್ಪ ಸೂಡಿ, ಖಾಜಾಸಾಬ ಇಸ್ಮಾಯಿಲನವರ, ಸಲೀಂ ಹರಿಹರ ಹಾಗೂ ಮುಂತಾದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಸ್ತುತ ವಸತಿ ರಹಿತ ಕುಟುಂಬಗಳ ಸಮೀಕ್ಷೆಯನ್ನು ಮಾಡಿ `ನಗರ ಲ್ಯಾಂಡ್ ಬ್ಯಾಂಕ್’ ಯೋಜನೆಯನ್ನು ಜಾರಿಗೊಳಿಸಿ ಮನೆ ಇಲ್ಲದ ಕುಟುಂಬಕ್ಕೊಂದು ಮನೆ ನೀಡಲು ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿ ಸರ್ಕಾರವೇ ಮನೆ ನಿರ್ಮಿಸಿಕೊಡಬೇಕು ಎಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.