‘ಸಂಜು ವೆಡ್ಸ್ ಗೀತಾ 2’ ರೀ ರಿಲೀಸ್ ಪ್ರಚಾರಕ್ಕೆ ನಟಿ ರಚಿತಾ ರಾಮ್ ಬಂದಿಲ್ಲ. ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಕ ನಾಗಶೇಖರ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದರ ಜೊತೆಗೆ ‘ಉಪ್ಪಿ ರಪ್ಪಿ’ ತಂಡ ಕೂಡ ರಚಿತಾ ಅವರಿಂದ ತಮಗೆ ಸಮಸ್ಯೆ ಆಗಿದೆ ಎಂದು ಆರೋಪಿಸಿದೆ.
ನಾಗಶೇಖರ್ ರಚಿತಾ ವಿರುದ್ಧ ತಿರುಗಿ ಬೀಳುತ್ತಿದ್ದಂತೆ ಮತ್ತೊಂದು ಚಿತ್ರತಂಡ ಕೂಡ ರಚಿತಾ ರಾಮ್ ಮೇಲೆ ಆರೋಪ ಮಾಡಿದೆ. ಈ ಬಗ್ಗೆ ಫಿಲಂ ಚೇಂಬರ್ ನಲ್ಲಿ ದೂರು ಕೂಡ ದಾಖಲಾಗಿದೆ. ಉಪ್ಪಿ ರುಪ್ಪಿ ಸಿನೆಮಾಗಾಗಿ ನಟಿ ರಚಿತಾ ರಾಮ್ ಅವರು ಅಡ್ವಾನ್ಸ್ ಪಡೆದಿದ್ದರು. ಹಣ ವಾಪಸ್ ನೀಡದ ಹಿನ್ನೆಲೆ ದೂರು ದಾಖಲಾಗಿದೆ.
8 ವರ್ಷದ ಹಿಂದೆ ಉಪೇಂದ್ರ ರಚಿತಾ ನಟನೆಯಲ್ಲಿ ಉಪ್ಪಿ ರಪ್ಪಿ ಚಿತ್ರ ಮೂಡಿ ಬರಬೇಕಿತ್ತು. ಚಿತ್ರದಲ್ಲಿ ಉಪೇಂದ್ರ ಜೊತೆಗೆ ನಟಿ ರಚಿತಾ ರಾಮ್ ನಟಿಸಲು ಒಪ್ಪಿಕೊಂಡಿದ್ದರು. 23 ಲಕ್ಷ ಸಂಭಾವನೆಗೆ ಒಪ್ಪಿಕೊಂಡು 13 ಲಕ್ಷ ಅಡ್ವಾನ್ಸ್ ಪಡೆದಿದ್ದರು. 2017ರಲ್ಲಿ ಬ್ಯಾಂಕಾಕ್ ನಲ್ಲಿ ಶೂಟಿಂಗ್ ಪ್ಲಾನ್ ಮಾಡಲಾಗಿತ್ತು. ಫ್ಲೈಟ್ ಟಿಕೆಟ್ ಬುಕಿಂಗ್ ಬಳಿಕ ರಚಿತಾ ರಾಮ್ ಚಿತ್ರೀಕರಣಕ್ಕೆ ಬರಲಿಲ್ಲ. ಚಿತ್ರೀಕರಣಕ್ಕೆ ಬರುವುದಾಗಿ ಹೇಳಿ 15 ದಿನಗಳ ಕಾಲ ನಟಿ ರಚಿತಾ ರಾಮ್ ಸತಾಯಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.