ವಿಜಯಸಾಕ್ಷಿ ಸುದ್ದಿ, ಗದಗ: ಯೋಗವು ಯಾವುದೇ ಖರ್ಚಿಲ್ಲದೇ ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ ಮತ್ತು ಅದು ನಮ್ಮ ದೊಡ್ಡ ಸಂಪತ್ತಿಗೆ ಕಾರಣವಾಗುತ್ತದೆ ಎಂದು ಶಿವ ಪಾರ್ವತಿ ಯೋಗ ಫೌಂಡೇಶನ್ನ ಯೋಗ ಗುರುಗಳಾದ ಸಿದ್ಧಣ್ಣ ಜವಳಿ ಹೇಳಿದರು.
ಅವರು ಶಿವಸಂಗಮ ಸಮೂಹ ಸಂಸ್ಥೆ, ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಯೋಗವೆಂದರೆ ತಿರುಗುವ, ಬಾಗುವ, ಚಾಚುವ ಮತ್ತು ಉಸಿರಾಟದ ವ್ಯಾಯಾಮವೆಂದು ಜನರು ತಿಳಿದಿದ್ದಾರೆ. ಆದರೆ ನಿಜವಾಗಿಯೂ ಯೋಗವೆಂದರೆ ವ್ಯಕ್ತಿಯ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊರಹೊಮ್ಮಿಸುವ ಒಂದು ವಿಜ್ಞಾನವಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಮಾಗಡಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ಪುರಸ್ಕೃತ ಎಸ್.ವೈ. ಕುಂಬಾರ ಮಾತನಾಡಿ, ಹೊರಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ನಮ್ಮ ದೇಹದಲ್ಲಿ ಏನಾಗಬೇಕು ಎಂಬುದನ್ನು ನಾವು ಯೋಗದಿಂದ ನಿಯಂತ್ರಿಸಬಹುದು ಎಂದರು.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 10ನೇ ರ್ಯಾಂಕ್ ಮತ್ತು ಜಿಲ್ಲೆಗೆ 2ನೇ ರ್ಯಾಂಕ್ ಪಡೆದ ವಿಜಯರಾಜ ಶಿದ್ಲಿಂಗ್, ಅಧ್ಯಕ್ಷತೆ ವಹಿಸಿದ್ದ ಶಿವಸಂಗಮ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಮಾತನಾಡಿದರು.
ಜಗದೀಶ ಹುಡೇದ ಸ್ವಾಗತಿಸಿ ನಿರೂಪಿಸಿದರು. ಮಹೇಶ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣಕುಮಾರ ಹಿರೇಮಠ ವಂದಿಸಿದರು.