ವಿಜಯಸಾಕ್ಷಿ ಸುದ್ದಿ, ಗದಗ: ನರಗುಂದ ನೆಲದಲ್ಲಿ ಹುಟ್ಟಿ ಬೆಳೆದ ಮಹಾನ್ ದೇಶಭಕ್ತ, ಕರ್ನಾಟಕದ ಕೇಸರಿ ಜಗನ್ನಾಥರಾವ್ ಜೋಶಿ ಅವರು ಗೋವಾ ವಿಮೋಚನಾ ಚಳುವಳಿಯ ಪ್ರೇರಣಾ ಶಕ್ತಿಯಾಗಿದ್ದರು ಎಂದು ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಮ್.ಎಸ್. ಕರಿಗೌಡ್ರ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಗನ್ನಾಥರಾವ್ ಜೋಶಿ ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗೋವಾವನ್ನು ಪೋರ್ಚುಗೀಸರು ಆಳುತ್ತಿದ್ದ ಕಾಲದಲ್ಲಿ ಆ ರಾಜ್ಯದ ಪ್ರವೇಶಕ್ಕೆ ಅನುಮತಿ ಕಡ್ಡಾಯವಾಗಿತ್ತು. ಚಳುವಳಿಯ ನೇತೃತ್ವ ವಹಿಸಿದ್ದ ಜಗನ್ನಾಥರನ್ನ ಅಕ್ರಮ ಪ್ರವೇಶದ ಹೆಸರಲ್ಲಿ ಸಾವಂತ್ವಾಡ ಅರಣ್ಯ ಪ್ರದೇಶದಲ್ಲಿ ಬಂಧಿಸಿ ಕಾರಾಗ್ರಹದಲ್ಲಿಟ್ಟು ಹಿಂಸಿಸಲಾಯಿತು. ಎಷ್ಟೋ ದಿನಗಳ ನಂತರ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಜೋಶಿ ಅವರು `ನಾನು ನಿಮ್ಮನ್ನು ಗೋವಾದಿಂದ ಹೊರ ಹೋಗುವಂತೆ ಹೇಳಲು ಬಂದಿರುವೆ. ಇದು ನನ್ನ ಮಾತೃಭೂಮಿಯ ಅವಿಭಾಜ್ಯ ಅಂಗ. ಇಲ್ಲಿ ನಿಮಗೇನು ಕೆಲಸ, ಗೋವಾ ಬಿಟ್ಟು ತೊಲಗಿ’ ಎಂದು ಸಿಂಹ ಘರ್ಜನೆ ಮಾಡಿದ್ದು ಪೋರ್ಚುಗೀಸರ ಜಂಗಾಭಲವೇ ಕಮರಿಹೋಗಲು ಕಾರಣವಾಯಿತು ಎಂದರು.
ನಾಡಿನ ಒಳಿತಿಗಾಗಿ, ಸಮುದಾಯದಗಳ ಸೌಹಾರ್ದತೆಗಾಗಿ ಸಂಘಟನೆ, ಪಕ್ಷ, ಸರ್ಕಾರಗಳ ಪ್ರತಿನಿಧಿಯಾಗಿ ಸಂಪೂರ್ಣ ಸಮರ್ಪಣಾ ಭಾವದಿಂದ ಜನಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು ಎಂದು ಎಮ್.ಎಸ್. ಕರಿಗೌಡ್ರ ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ವಹಿಸಿದ್ದರು. ಬಸವಣ್ಣೆಪ್ಪ ಚಿಂಚಲಿ, ಜಗನ್ನಾಥಸಾ ಭಾಂಡಗೆ, ಎಂ.ಎಂ. ಹಿರೇಮಠ, ನಾಗರಾಜ ಕುಲಕರ್ಣಿ, ಕೆ.ಪಿ. ಕೋಟಿಗೌಡ್ರ, ಸುರೇಶ ಮರಳಪ್ಪನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, ಸುಧೀರ ಕಾಟೀಗರ, ಅಶೋಕ ಕುಡತಿನಿ, ಸಂತೋಷ ಅಕ್ಕಿ, ಸಿದ್ದು ಮೊರಬದ, ರಮೇಶ ಸಜ್ಜಗಾರ, ಶಂಕರ ಖಾಕಿ, ದೇವೇಂದ್ರಪ್ಪ ಗೋಟುರ, ಅಪ್ಪಣ್ಣ ಟೆಂಗಿನಕಾಯಿ, ಸ್ವಾತಿ ಅಕ್ಕಿ, ರೇಖಾ ಬಂಗಾರಶೆಟ್ರ, ಕವಿತಾ ಬಂಗಾರಿ, ದೇವೇಂದ್ರಪ್ಪ ಹೂಗಾರ, ಕುಮಾರ ಮಾರನಬಸರಿ, ಸಂತೋಷ ಕಲ್ಯಾಣಿ, ರಾಚಯ್ಯ ಹೊಸಮಠ, ವಿನೋದ ಹಂಸನೂರ ಮುಂತಾದ ಗಣ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿರಿಯ ಮುಖಂಡ ಶ್ರೀಪತಿ ಉಡುಪಿ ಮಾತನಾಡಿ, ಕರ್ನಾಟಕದಲ್ಲಿ ಜನಸಂಘ ಹಾಗೂ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಜಗನ್ನಾಥರ ಸಂಘಟನಾ ಪ್ರವಾಸ, ಅಧ್ಯಯನ, ಪರಿಶ್ರಮ, ಸಂಕಲ್ಪ, ಹೋರಾಟಗಳು ಮಹತ್ತರ ಪಾತ್ರ ವಹಿಸಿವೆ. ಯಾವುದೇ ದೇಶ ಸುಭದ್ರವಾಗಿ ಇರಬೇಕಾದರೆ ಅಲ್ಲಿಯ ಜನರು ವೈಚಾರಿಕ ಹಾಗು ಸೈದ್ಧಾಂತಿಕಾವಾಗಿ ರೂಪಗೊಂಡಾಗ ಮಾತ್ರ ಸಾಧ್ಯ ಎಂಬುದು ಅವರ ನಂಬಿಕೆಯಾಗಿತ್ತು ಆ ಕಾರಣದಿಂದಲೇ ಜಗನ್ನಾಥರ ಎಲ್ಲಾ ಕೆಲಸ-ಕಾರ್ಯಗಳು ಆ ದೃಷ್ಟಿಕೋನ ಹೊಂದಿರುತ್ತಿದವು ಎಂದರಲ್ಲದೆ, ಜಗನ್ನಾಥ ಜೋಶಿ ಅವರ ಉತ್ತರ ಕರ್ನಾಟಕ ಪ್ರವಾಸ, ಭಾಷಣ ಇತ್ಯಾದಿ ಸಂಗತಿಗಳು, ಅವರ ಜೊತೆಗಿನ ಒಡನಾಟವನ್ನ ಹಂಚಿಕೊಂಡರು.