ನೆಲಮಂಗಲ:- ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಜೊತೆಗೆ ಮಗನ ನಾಮಕರಣಕ್ಕೆ ಕೂಡಿಟ್ಟ ಹಣವನ್ನು ದೋಚಿ ಎಸ್ಕೇಪ್ ಆಗಿರುವ ಘಟನೆ ನೆಲಮಂಗಲ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಭಿಷೇಕ್ ಎನ್ನುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಚಿನ್ನಾಭರಣ ಕಳೆದುಕೊಂಡಿರುವ ಅಭಿಷೇಕ್, ನೆಲಮಂಗಲ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಗಂಗೊಂಡನಹಳ್ಳಿಯಲ್ಲಿ ಎರಡು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡು ವಾಸವಾಗಿದ್ದರು. ಜೀವನ ನಡೆಸುವುದಕ್ಕೆ ಸಣ್ಣ ಹೋಟೆಲ್ ಇಟ್ಟುಕೊಂಡಿದ್ದರು. ಇದರಲ್ಲಿ ಬರುವ ಹಣದಲ್ಲಿ ಸಣ್ಣಪುಟ್ಟ ಒಡವೆ ಖರೀದಿಸಿದ್ದರು. ಆದರೆ ಎರಡು ದಿನದ ಹಿಂದೆ ಊರಿಗೆ ಹೋಗಿದ್ದ ಅಭಿಷೇಕ್ ಕುಟುಂಬ ವಾಪಸ್ ಬರುವಷ್ಟರಲ್ಲಿ ಖದೀಮರು ಮನೆ ಬಾಗಿಲು ಮುರಿದು ಮನೆಗಳ್ಳತನ ಮಾಡಿದ್ದಾರೆ. ಸಿಸಿಟಿಯಲ್ಲಿ ಸೆರೆಯಾದಂತೆ ಅದನ್ನು ಮೇಲಕ್ಕೆ ತಿರುಗಿಸಿ ಕೃತ್ಯವೆಸಗಿದ್ದಾರೆ.
ಇನ್ನೂ ಮನೆಗೆ ಬಂದು ನೋಡಿದಾಗ ಮನೆಯ ರೂಂನಲ್ಲಿದ್ದ 5 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ, ದೇವರ ಮನೆಯಲ್ಲಿದ್ದ ಬೆಳ್ಳಿ ವಸ್ತುಗಳು ಹಾಗೂ ಮಗನ ನಾಮಕರಣಕ್ಕಾಗಿ ಅಭೀಷೇಕ್ ಪತ್ನಿ ಸಂಪಾದಿಸಿ ಕೂಡಿಟ್ಟಿದ್ದ ಹಣವನ್ನು ದೋಚಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.