ಬೆಂಗಳೂರು:- ಬೆಂಗಳೂರಿನ ಚಿಕ್ಕಜಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಪಬ್ಗೆ ಪಾರ್ಟಿಗೆ ಕರೆದ ಸ್ನೇಹಿತರೇ ಸುಲಿಗೆ ಮಾಡಿಸಿದ್ದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಪವನ್, ಪ್ರೇಮ್ ಶೆಟ್ಟಿ, ಅಚಲ್, ತರುಣ್ ಬಂಧಿತರು.
ಚಂದನ್ ಎನ್ನುವ ಯುವಕನಿಗೆ ಪವನ್ ಮತ್ತು ಅಚಲ್ ಎಂಬಿಬ್ಬರು ಸ್ನೇಹಿತರಿದ್ದರು. ಚಂದನ್ ಅರ್ಥಿಕವಾಗಿ ಚನ್ನಾಗಿದ್ದ. ಕಳೆದ ಮೇ 1 ರಂದು ಚಂದನ್ಗೆ ಕರೆ ಮಾಡಿ ಚಿಕ್ಕಜಾಲ ಬಳಿಯ ಪಬ್ಗೆ ಬರುವಂತೆ ಹೇಳಿದ್ದರು.
ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಪಾರ್ಟಿ ಮಾಡಿದ್ದರು. ನಂತರ ಜಾಲಿ ರೈಡ್ ಹೋಗೋಣ ಅಂತಾ ಚಂದನ್ ಕಾರಿನಲ್ಲೇ ಏರ್ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ ಮೂರು ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು. ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಅಂತಾ ಚಂದನ್ಗೆ ಮನವೊಲಿಸಿದ್ದರು.
ಇದಾದ ಒಂದು ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ. ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಲಿಗೆಕೋರರಿಗೆ ಸುಪಾರಿ ನೀಡಿ ಸುಲಿಗೆ ಮಾಡಿರುವುದು ಗೊತ್ತಾಗಿತ್ತು. ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.