HomeGadag Newsಕಾಂಗ್ರೆಸ್‌ನಿಂದ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ

ಕಾಂಗ್ರೆಸ್‌ನಿಂದ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪ್ರಭುತ್ವವನ್ನು ಬಲಪಡಿಸಲು, ಕಾಂಗ್ರೆಸ್‌ನ ನಿಜವಾದ ಡಿಎನ್‌ಎಯನ್ನು ಜನರಿಗೆ ತಿಳಿಸಲು ಬಿಜೆಪಿ ತುರ್ತು ಪರಿಸ್ಥಿತಿ ಕರಾಳ ದಿನ ನೆನಪು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಜಾಪ್ರಭುತ್ವವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಹಿಂದಿನಿಂದಲೂ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ನಗರದ ವಿಠಲಾರೂಢ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ `ತುರ್ತು ಪರಿಸ್ಥಿತಿ ಕರಾಳ ದಿನ’ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ಡಿಎನ್‌ಎಯಲ್ಲಿ ಪ್ರಜಾಪ್ರಭುತ್ವದ ಕೊರತೆ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದು 1971ರಲ್ಲಿ. ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರ ಗೆಲುವನ್ನು ಅನೂರ್ಜಿತಗೊಳಿಸಿ, ಆರು ವರ್ಷಗಳ ಕಾಲ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಆದೇಶಿಸಿತು. ನಂತರ, ಇಂದಿರಾ ಗಾಂಧಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸಬಹುದಾದರೂ ಮತ ಚಲಾಯಿಸುವಂತಿಲ್ಲ ಎಂದು ಹೇಳಿತು. ಇಂದಿರಾ ಗಾಂಧಿ ಇದರಿಂದ ವಿಚಲಿತರಾಗಿ, ಸಂವಿಧಾನದ 38, 40, 41ನೇ ಕಲಂಗಳಿಗೆ ತಿದ್ದುಪಡಿ ತಂದು, ತಮ್ಮ ಆಯ್ಕೆಯನ್ನು ಪ್ರಶ್ನಿಸಲು ಸಾಧ್ಯವಾಗದಂತೆ ಚಕ್ರವ್ಯೂಹ ರಚಿಸಿದರು ಎಂದು ಹೇಳಿದರು.

1975ರ ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಲಾಯಿತು. ಇಂದಿರಾ ಗಾಂಧಿ ಹಿಟ್ಲರ್‌ನಂತೆ ವರ್ತಿಸಿದರು. 2.23 ಲಕ್ಷ ಜನರನ್ನು ಬಂಧಿಸಲಾಯಿತು. ಜನರನ್ನು ಬೌದ್ಧಿಕ ಆಘಾತಕ್ಕೆ ಒಳಪಡಿಸಲಾಯಿತು ಎಂದು ಜೋಶಿ ನೆನಪಿಸಿಕೊಂಡರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಇಂದಿರಾ ಗಾಂಧಿಯವರ ಗೆಲುವು ಅಸಂವಿಧಾನಿಕ ಎಂದು ಅಲಹಾಬಾದ್ ಕೋರ್ಟ್ ತೀರ್ಪು ನೀಡಿತ್ತು. ಆದರೆ, ಇಂದಿರಾ ಗಾಂಧಿ ದಬ್ಬಾಳಿಕೆ ಮೂಲಕ ತುರ್ತು ಪರಿಸ್ಥಿತಿ ಹೇರಿದ್ದರು. ಅವರ ನಂತರ ಅವರ ಪುತ್ರರು ಸಂತಾನ ಹರಣ ಯೋಜನೆ ಜಾರಿ ಮಾಡುವ ಮೂಲಕ ಭಾರತದ ಜನಸಂಖ್ಯೆಯನ್ನು ಕಡಿಮೆ ಮಾಡುವಂತೆ ಮಾಡಿದರು. ಸಂವಿಧಾನ ಹತ್ಯೆ ಮಾಡಿದವರು ಕಾಂಗ್ರೆಸ್ ಪಕ್ಷದ ಮುಖಂಡರು. ಈಗ ಸಂವಿಧಾನ ರಕ್ಷಿಸಿ ಎಂದು ಡಾಂಭಿಕತನ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.

ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದ ಕೃಷ್ಣ ಹೊಂಬಾಳಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಪ್ರಮುಖರಾದ ಲಿಂಗರಾಜ ಪಾಟೀಲ, ಎಂ.ಎಸ್. ಕರಿಗೌಡ್ರ, ಮಹೇಂದ್ರ ಕೌತಾಳ, ಮಂಜುನಾಥ ಮುಳಗುಂದ, ಮೋಹನ ಮಾಳಶೆಟ್ಟಿ, ಎಂ.ಎಂ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕೇಂದ್ರದ ವಿರೋಧ ಪಕ್ಷಗಳಿಂದ ದೇಶಕ್ಕೆ ಆತಂಕವಿದೆ. ಆದರೆ, ನರೇಂದ್ರ ಮೋದಿ ಅವರ ಅಧಿಕಾರದಲ್ಲಿ ದೇಶದ ಭದ್ರತೆ ಮತ್ತು ಅಖಂಡತೆಯೊಂದಿಗೆ ಯಾವುದೇ ರಾಜಿಯಿಲ್ಲ. ಕಾಂಗ್ರೆಸ್‌ನ ನಕಲಿ ಗಾಂಧಿಗಳು ಭಾರತೀಯರನ್ನು ಆಳುತ್ತಾ ಬಂದರೇ ಹೊರತು, ಜನರ ಅಭಿವೃದ್ಧಿಯ ಬಗ್ಗೆ ಚಿಂತಿಸಲಿಲ್ಲ ಎಂದು ಆರೋಪಿಸಿದರಲ್ಲದೆ, ಎಚ್.ಕೆ. ಪಾಟೀಲ ಅವರು ಕಾನೂನು ಮಂತ್ರಿಯಾಗಿ ತುರ್ತು ಪರಿಸ್ಥಿತಿಯನ್ನು ಸ್ವಾಗತಿಸುತ್ತಾರಾ? ಹಾಗೆ ತುರ್ತು ಪರಿಸ್ಥಿತಿಯನ್ನು ಒಪ್ಪಿಕೊಂಡಿದ್ದೇ ಆದರೆ, ಸಂವಿಧಾನ ಹಿಡಿಯುವುದನ್ನು ಕೈಬಿಡಬೇಕು ಎಂದು ಸವಾಲು ಹಾಕಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!