ನವದೆಹಲಿ:- ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸುತ್ತಿರುವ ರಾಹುಲ್ ಗಾಂಧಿ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿಕೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈಗ ಆರೋಪ ಮಾಡ್ತಿದ್ದಾರೆ, ಒಂದು ವರ್ಷದ ಹಿಂದೆ ಯಾಕೆ ಮಾಡಿಲ್ಲ. ನಿಮ್ಮ ಬೆಂಗಳೂರು ಸೆಂಟ್ರಲ್ನ ಕಾಂಗ್ರೆಸ್ ಅಭ್ಯರ್ಥಿ ಈ ಬಗ್ಗೆ ಯಾಕೆ ಪ್ರಶ್ನೆ ಮಾಡಿಲ್ಲ. ಇದುವರೆಗೂ ಯಾಕೆ ದೂರು ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಹುಲ್ ಗಾಂಧಿಯವರೇ ನಿಮ್ಮ ಬಳಿ ದಾಖಲೆಗಳು ಇದ್ದರೆ ಕೋರ್ಟ್ಗೆ ಹೋಗಿ, ಚುನಾವಣೆ ಆಯೋಗಕ್ಕೆ ದಾಖಲೆ ಸಲ್ಲಿಸಿ ದೂರು ನೀಡಿ. ಅದನ್ನು ಹೊರತುಪಡಿಸಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡೋದು ಸರಿಯಲ್ಲ. ಎನ್ಡಿಎ ಒಕ್ಕೂಟದಡಿ ಪ್ರಧಾನಿ ಆಗಿದ್ದಾರೆ. ಸರ್ಕಾರ ಬಂದಾಗಿದೆ, ಈಗ ಆರೋಪ ಮಾಡಿದ್ರೆ ಹೇಗೆ? ಪ್ರಧಾನಿ ಮೋದಿಯವರನ್ನು ಟೀಕೆ ಮಾಡೋದು,
ಸದಾ ಅಮೆರಿಕಾ, ಟ್ರಂಪ್, ಚೀನಾ ಪರ ಮಾತಾಡುವುದೇ ರಾಹುಲ್ ಗಾಂಧಿ ಕೆಲಸವಾಗಿಬಿಟ್ಟಿದೆ. ಚುನಾವಣೆಯಲ್ಲಿ ಅಕ್ರಮ ಆಗಿದ್ದರೆ ಮೊದಲು ನೀವು ಕೋರ್ಟ್ಗೆ ಹೋಗಿ ಅಥವಾ ಚುನಾವಣೆ ಆಯೋಗಕ್ಕೆ ದೂರು ನೀಡಿ. ದೇಶದ ಸ್ವಾಯತ್ತ ಸಂಸ್ಥೆ ಮೇಲೆ ಆರೋಪ ಮಾಡುವುದು ತಪ್ಪು ಎಂದು ಕಿಡಿಕಾರಿದ್ದಾರೆ.