ಕನ್ನಡ ಚಿತ್ರರಂಗದ ಹಿರಿಯ ನಟ ದಿನೇಶ್ ಮಂಗಳೂರು ನಿಧನರಾಗಿದ್ದಾರೆ. ದಿನೇಶ್ ನಿಧನದ ಸುದ್ದಿ ಕೇಳಿ ಹಲವರು ಕಂಬನಿ ಮಿಡಿದಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಅಘಾತವಾಗಿದೆ. ಇದೀಗ ದಿನೇಶ್ ಅವರಿಗೆ ಏನಾಗಿತ್ತು, ಅವರಿಗೆ ಇದ್ದ ಆರೋಗ್ಯ ಸಮಸ್ಯೆಗಳು ಯಾವುವು ಎಂಬುದನ್ನು ಅವರ ಮಗ ಸಜನ್ ತಿಳಿಸಿದ್ದಾರೆ.
‘ತಂದೆಗೆ ವರ್ಷದ ಹಿಂದೆ ಬ್ರೈನ್ ಸ್ಟ್ರೋಕ್ ಆಗಿತ್ತು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಗಸ್ಟ್ 6ರಂದು ಅಸ್ಪತ್ರೆಗೆ ದಾಖಲು ಮಾಡಿದ್ದೆವು. ಸ್ವಲ್ಪ ದಿನದ ಬಳಿಕ ಚೇತರಿಸಿಕೊಂಡಿದ್ದರು. ಆದರೆ ವಾರದ ಹಿಂದೆ ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು (ಆಗಸ್ಟ್ 25) ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ’ ಎಂದಿದ್ದಾರೆ.
ಇನ್ನೂ ‘ಕಾಂತಾರ’ ಚಿತ್ರದಲ್ಲೂ ದಿನೇಶ್ ನಟಿಸಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಸ್ಪಷ್ಟನೆ ನೀಡಿರುವ ಸಜನ್, ‘ಆ ದಿನಗಳು ಚಿತ್ರದಿಂದ ನನ್ನ ತಂದೆ ನಟನೆ ಆರಂಭಿಸಿದರು. ಅದರ ಬಳಿಕ ರಿಕ್ಕಿ, ಉಳಿದವರು ಕಂಡಂತೆ, ಕೆಜಿಎಫ್ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದಾರೆ. ಕಾಂತಾರ ಚಿತ್ರದಲ್ಲಿ ನಟನೆ ಮಾಡಿಲ್ಲ. ಕಾಂತಾರ ಸೆಟ್ಗೂ ಹೋಗಲಿಲ್ಲ’ ಎಂದಿದ್ದಾರೆ.
ಇನ್ನೂ ನಟ ದಿನೇಶ್ ನಿಧನದ ಬಗ್ಗೆ ಮಾತನಾಡಿರುವ ಕುಂದಾಪುರದ ಸರ್ಜನ್ ಆಸ್ಪತ್ರೆಯ ಮುಖ್ಯಸ್ಥ ಡಾ. ವಿಶ್ವೇಶ್ವರ ರಾವ್, ‘ನಟ ದಿನೇಶ್ ಮಂಗಳೂರು ಅವರಿಗೆ 2012ರಿಂದ ಅನಾರೋಗ್ಯ ಇತ್ತು. ಗ್ಯಾಂಗ್ರಿನ್ ಆಗಿ ಬೆರಳುಗಳನ್ನು ಕಟ್ ಮಾಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕಾಪಾಡಿಕೊಂಡಿದ್ದರು’ ಎಂದಿದ್ದಾರೆ.
‘ವರ್ಷದ ಹಿಂದೆ ದಿನೇಶ್ಗೆ ಸ್ಟ್ರೋಕ್ ಆಗಿತ್ತು. ದೇಹದ ಒಂದು ಭಾಗ ಕಾರ್ಯ ನಿರ್ವಹಿಸುವುದು ಸ್ಥಗಿತಗೊಳಿಸಿತ್ತು. ಫಿಜಿಯೋಥೆರಪಿ ಮಾಡಲಾಗುತ್ತಿತ್ತು. ಇತ್ತೀಚಿಗೆ ಅವರಿಗೆ ಮತ್ತೊಮ್ಮೆ ಬ್ರೈನ್ ಹ್ಯಾಮರೇಜ್ ಉಂಟಾಯಿತು. ಮೆದುಳಿನಲ್ಲಿ ರಕ್ತನಾಳ ಒಡೆದ ಕಾರಣ ಬಹು ಅಂಗಾಂಗ ವೈಫಲ್ಯ ಉಂಟಾಯಿತು. ಅವರು ಬಿಪಿ, ಡಯಾಬಿಟಿಸ್, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೊನೆಯದಾಗಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನೂ ಮೃತ ದಿನೇಶ್ ಅವರ ಬೆಂಗಳೂರಿನ ಮನೆಯಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿದ್ದು, ಆಗಸ್ಟ್ 26ರ ಮಧ್ಯಾಹ್ನದವರೆಗೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.



