ಗದಗ:- ಎಲ್ಲೆಡೆ ಗಣೇಶೋತ್ಸವದ ಸಂಭ್ರಮದ ನಡುವೆ ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಹೃದಯಸ್ಪರ್ಶಿ ಘಟನೆ ಎಲ್ಲರ ಗಮನ ಸೆಳೆದಿದೆ.

ದೇಶದಲ್ಲಿ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ಜಾತಿ ಜಾತಿಗಳ ನಡುವೆ ಹೊಡೆದಾಟ, ಗದ್ದಲ, ಗಲಾಟೆ ನಡಿಯುತ್ತಲೇ ಇದೆ. ಆದ್ರೆ, ಈ ಗ್ರಾಮದಲ್ಲಿ ಮಾತ್ರ ಜಾತಿ, ಪಂಥ, ಬೇಧ ಇಲ್ಲದೇ ಗಣೇಶ ಹಬ್ಬ ಸಡಗರ, ಸಂಭ್ರಮದಿಂದ ಆಚರಣೆ ಮಾಡ್ತಾರೆ. ಎಸ್, ಈ ಎಲ್ಲಾ ದೃಶ್ಯಗಳು ಕಂಡಿದ್ದು, ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ.
ಸಿಂಹಾಸನದ ಮೇಲೆ ವಿರಾಜಮಾನವಾದ ಮನಮೋಹಕ ಗಣೇಶನಿಗೆ ಹಿಂದೂ-ಮುಸ್ಲಿಂ ಬಾಂಧವರು ಸಾಮೂಹಿಕ ಪೂಜೆ ಮಾಡ್ತಾಯಿದ್ದಾರೆ. ಕಳಸಾಪೂರ ಗ್ರಾಮದಲ್ಲಿ ವಿಘ್ನೇಶ್ವರನಿಗೆ ಒಂದುಕಡೆ ಹಿಂದೂ ಮಹಿಳೆ ಮತ್ತೊಂದು ಕಡೆ ಮುಸ್ಲಿಂ ಮಹಿಳೆ ಆರತಿ ಮಾಡುವ ದೃಶ್ಯ ದೇಶಕ್ಕೆ ಭಾವೈಕ್ಯತೆ ಸಂದೇಶ ಸಾರುವಂತಿದೆ. ಇದಕ್ಕೆಲ್ಲಾ ಕಾರಣವಾಗಿರೋ ಅಂಜುಮನ್ ಏ ಇಸ್ಲಾ ಕಮಿಟಿ ಹಾಗೂ ಈಶ್ವರ ಬಸವಣ್ಣ ದೇವಾಲಯದ ಕಮಿಟಿ. ಈ ಎರಡು ಕಮಿಟಿಗಳ ಸಹಯೋಗದಲ್ಲಿ ಪ್ರತಿವರ್ಷ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯಲ್ಲಿ ಇಲ್ಲಿನ ಮುಸ್ಲಿಂ ಬಾಂಧವರು, ಹಿಂದೂಗಳ ಜೊತೆ ಸೇರಿ ವಿಘ್ನ ನಿವಾರಕನನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಿತ್ಯವೂ ಹಿಂದೂ-ಮುಸ್ಲಿಂ ಬಾಂಧವರು ಸೇರಿ ಸಾಮೂಹಿಕವಾಗಿ ಪೂಜೆ ಪುನಸ್ಕಾರದಲ್ಲಿ ತೊಡಗಿಕೊಳ್ತಾರೆ.
ಸತತ 15 ವರ್ಷದಿಂದ ಅಂಜುಮನ್ ಏ -ಇಸ್ಲಾಂ ಹಾಗೂ ಈಶ್ವರ ದೇವಾಲಯ ಕಮಿಟಿಯವರು ಜಂಟಿಯಾಗಿ ಏಕದಂತನನ್ನ ಪೂಜೆ ಮಾಡ್ತಾರೆ. ಒಟ್ಟಿಗೆ ಹಬ್ಬ ಆಚರಿಸೋ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಶಾಂತಿಗೆ ಹೆಸರಾದ ಕಳಸಾಪೂರ ಗ್ರಾಮ, ಈಗ ಭಾವೈಕ್ಯೆತೆಯ ಕೇಂದ್ರ ಬಿಂದುವಾಗಿದೆ. ಸತತ 15 ವರ್ಷಗಳಿಂದ ಇಲ್ಲಿನ ಹಿಂದೂಗಳು ಹಾಗೂ ಮುಸ್ಲಿಮರು ಸೇರಿ ವಿನಾಯಕನನ್ನು ಪ್ರತಿಷ್ಠಾಪನೆ ಮಾಡ್ತಾ ಇದ್ದಾರೆ. ವರ್ಷದಿಂದ ವರ್ಷಕ್ಕೆ ಕಳಸಾಪುರದ ಭಾವೈಕ್ಯತಾ ಗಣೇಶ ಗ್ರಾಮಸ್ಥರಲ್ಲಿ ಒಗ್ಗಟ್ಟನ್ನು ಹೆಚ್ಚಿಸುತ್ತಿದ್ದಾನೆ. ಇಡೀ ರಾಜ್ಯಾದ್ಯಂತ ಕಳಸಾಪುರ ಭಾವೈಕ್ಯತೆಗೆ ಕಳಸಪ್ರಾಯವಾಗಿದೆ ಎನ್ನೋ ಭಾವನೆಯನ್ನು ಸ್ಥಳೀಯರಲ್ಲಿ ಮೂಡಿಸುತ್ತಿದ್ದಾನೆ. ಒಟ್ಟಾಗಿ ಹಿಂದೂ- ಮುಸ್ಲಿಂರೆಲ್ಲರು ಒಟ್ಟಾಗಿ ರಂಜಾನ್, ಈದ್ ಮಿಲಾದ್, ಮೊಹರಂ, ದಸರಾ ಹೀಗೆ ಎಲ್ಲಾ ಹಬ್ಬಗಳನ್ನ ಆಚರಿಸುವ ಮೂಲಕ ಸಬ್ ಕಾ ಮಾಲೀಕ್ ಏಕ್ ಹೈ ಅನ್ನೋ ಮಾತನ್ನು ಕಳಸಾಪುರ ಗ್ರಾಮಸ್ಥರು ಸಾಬೀತು ಮಾಡುತ್ತಿದ್ದಾರೆ. ಗ್ರಾಮದಲ್ಲಿ ನಡೆಯುವ ಎಲ್ಲ ಹಬ್ಬಗಳನ್ನು ಇಲ್ಲಿನ ಜನರು ಜಾತಿ, ಮತ, ಪಂಥವಿಲ್ಲದೇ ಆಚರಣೆ ಮಾಡ್ತಾ ಬರುತ್ತಿರುವುದು ತುಂಬಾನೆ ಖುಷಿ ತರುತ್ತೆ ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ.
ಐದು ದಿನಗಳ ಕಾಲ ಭಕ್ತಿಪೂರ್ವಕವಾಗಿ ಪೂಜೆ ಪುನಸ್ಕಾರ ಮಾಡ್ತಾರೆ. ಅಂಜುಮನ್ ಕಮಿಟಿ ಹಾಗೂ ಈಶ್ವರ ದೇವಸ್ಥಾನದ ಕಮಿಟಿಯ ಸದಸ್ಯರು, ಎಲ್ಲಾ ಖರ್ಚು ವೆಚ್ಚಗಳಿಗೆ ಮೊದಲೇ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹ ಮಾಡಿರುತ್ತಾರೆ. ಒಟ್ಟಾರೇ ಇಂತಹ ಸಾಮರಸ್ಯದ ಬದುಕು ಹಾಗೂ ಆಚರಣೆ ಎಲ್ಲರಿಗೂ ಮಾದರಿಯಾಗಲಿ ಎಂಬುದು ನಮ್ಮ ಆಸೆಯ..



