ವಿಜಯಸಾಕ್ಷಿ ಸುದ್ದಿ, ಗದಗ: ಸರ್ವಾಂಗೀಣ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಿದ್ದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಕೊಡಮಾಡುವ `ಉತ್ತಮ ಪ್ರೌಢಶಾಲೆ’ ಪ್ರಶಸ್ತಿ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಗೆ ಲಭಿಸಿದೆ.
ಉತ್ತಮ ಪ್ರೌಢಶಾಲೆ ಪ್ರಶಸ್ತಿ ಪಡೆದ ಶಾಲೆಯ ಕುರಿತು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಸಭಾಪತಿ ಬಸವರಾಜ ಹೊರಟ್ಟಿಯವರು ಈ ಶಾಲೆಯನ್ನು ದತ್ತು ಪಡೆದ ನಂತರ ಶಾಲೆಯ ಗೌರವ ಹೆಚ್ಚಾಗುವುದರ ಜೊತೆಗೆ ತನ್ನ ಕಳೆಯನ್ನು ಹೆಚ್ಚಿಸಿಕೊಂಡಿದೆ. ನಾಲ್ಕು ಪ್ರೌಢಶಾಲೆಗಳಲ್ಲಿ ಇರುವಷ್ಟು ಮಕ್ಕಳು ಈ ಒಂದೇ ಶಾಲೆಯಲ್ಲಿ ಇರುವುದು ಹೆಮ್ಮೆಯ ಸಂಗತಿ. ದಿನದಿಂದ ದಿನಕ್ಕೆ ಈ ಶಾಲೆ ಅಭಿವೃದ್ಧಿ ಪಥದತ್ತ ಸಾಗುವ ಮೂಲಕ ರಾಜ್ಯದಲ್ಲಿಯೇ ಒಂದು ಮಾದರಿ ಶಾಲೆಯಾಗಿ ಹೊರಹೊಮ್ಮುತ್ತಿದೆ. ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳನ್ನು ಶಾಲಾ ದತ್ತು ಉಸ್ತುವಾರಿ ಡಾ.ಬಸವರಾಜ ಧಾರವಾಡ ಅವರನ್ನು ಹಾಗೂ ಇಲ್ಲಿಯ ಎಲ್ಲ ಸಿಬ್ಬಂದಿಯವರನ್ನು ಇಲಾಖೆಯ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ (ಅಭಿವೃದ್ಧಿ) ಮಂಗಳಾ ತಾಪಸ್ಕರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವ್ಹಿ.ಎಂ. ನಡುವಿನಮನಿ, ಆರ್.ವ್ಹಿ. ಶೆಟ್ಟೆಪ್ಪನವರ, ಎಮ್.ಆಯ್. ಕುರಿ, ಶಂಕ್ರಮ್ಮ ಆರ್. ಹಣಮಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಎಂ.ಐ. ಶಿವನಗೌಡ್ರು, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಪದ್ಮಾ ವಿ.ದಾಸರ್, ಸಂಜೀವಿನಿ ಕೂಲಗುಡಿ, ಲಕ್ಷ್ಮಮ್ಮ ಮಾಳೋತ್ತರ್, ಶಾರದಾ ಬಾಣದ ಮುಂತಾದವರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿದ ಪ್ರಭಾರಿ ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮೀ ಅಣ್ಣಿಗೇರಿ ಮಾತನಾಡಿ, ಕೇವಲ ಎರಡು ವರ್ಷದಲ್ಲಿ ಈ ಶಾಲೆ ಅಭೂತಪೂರ್ವ ಅಭಿವೃದ್ಧಿ ಹೊಂದಲು ಸಭಾಪತಿ ಹೊರಟ್ಟಿಯವರು, ಡಾ. ಬಸವರಾಜ ಧಾರವಾಡ, ಗದಗ ನಗರಸಭೆ, ವಿವಿಧ ಗಣ್ಯಮಾನ್ಯರು, ದಾನಿಗಳು, ವಿಶೇಷವಾಗಿ ಶಿಕ್ಷಣ ಇಲಾಖೆಯ ಸಹಕಾರ, ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳ ಪ್ರೋತ್ಸಾಹ, ಮತ್ತು ನಮ್ಮ ಶಾಲೆಯ ಸಿಬ್ಬಂದಿಯ ಶ್ರಮ, ಸಹಕಾರವೇ ಕಾರಣ. ಹೀಗಾಗಿ ಈ ಪ್ರಶಸ್ತಿ ಗೌರವವನ್ನು ಎಲ್ಲರಿಗೂ ಅರ್ಪಿಸುವುದಾಗಿ ಹೇಳಿದರು.


