ಬೆಂಗಳೂರು: ಮಳೆಗಾಲ ಆರಂಭವಾದ ನಂತರದಿಂದ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹ, ಭೂಕುಸಿತದಂತಹ ಪ್ರಾಕೃತಿಕ ದುರಂತಗಳಿಂದ ಇದುವರೆಗೆ 380 ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ, ಹಿಮಾಚಲ ಪ್ರದೇಶದ ವಿಪತ್ತು ಪರಿಹಾರ ಮತ್ತು ಪುನರ್ವಸತಿಗೆ ನೆರವಾಗಲು ಕರ್ನಾಟಕ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರೀ ಮಳೆಯಿಂದಾಗಿ ತತ್ತರಿಸಿರುವ ಹಿಮಾಚಲ ಪ್ರದೇಶಕ್ಕೆ 5 ಕೋಟಿ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಕರ್ನಾಟಕ ಸರ್ಕಾರವು ಪರಿಹಾರ ಮತ್ತು ಪುನರ್ವಸತಿಗಾಗಿ ₹5 ಕೋಟಿ ಕೊಡುಗೆ ನೀಡುತ್ತಿದ್ದು, ನಾವು ಹಿಮಾಚಲದ ಜನರೊಂದಿಗೆ ಹೆಗಲಿಗೆ ಹೆಗಲಿಗೆ ಕೊಟ್ಟು ನಿಲ್ಲುತ್ತೇವೆ ಎಂದು ಪತ್ರ ಬರೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹವು ಅಪಾರ ಜೀವಹಾನಿ, ಮನೆಗಳು ಮತ್ತು ಜೀವನೋಪಾಯಗಳಿಗೆ ಹಾನಿ ಮಾಡಿದ್ದು,
ಕರ್ನಾಟಕದ ಜನರು ಸಹ ನಿಮ್ಮ ಈ ನೋವಿನಲ್ಲಿ ಭಾಗಿಹಾಗಿ, ಹಿಮಾಚಲದ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತಾರೆ” ಎಂದಿದ್ದಾರೆ. ಮುಂದುವರೆದು, ನಿಮ್ಮೊಂದಿಗೆ ನಾವು ಇದ್ದೇವೆ ಎನ್ನುವ ಬೆಂಬಲದ ಸಂಕೇತವಾಗಿ, ನಮ್ಮ ಸರ್ಕಾರ ಹಿಮಾಚಲದ ಪರಿಹಾರ ಮತ್ತು ಪುನರ್ವಸತಿಗಾಗಿ ₹5 ಕೋಟಿ ಕೊಡುಗೆ ನೀಡುತ್ತಿದ್ದು, ಈ ದುಃಖದ ಸಮಯದಲ್ಲಿ, ನಾವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.