ವಿಜಯಸಾಕ್ಷಿ ಸುದ್ದಿ, ಗದಗ: ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ದಾಟಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ನಿವೃತ್ತ ಜೀವನ ನಡೆಸುತ್ತಿರುವ ಹಿರಿಯರು ಇಳಿವಯಸ್ಸಿನಲ್ಲಿ ಸದಾ ಖುಷಿಯಿಂದ ಇರಬೇಕು. ಜೀವನದಲ್ಲಿ ಮಕ್ಕಳಿಂದ ಅಥವಾ ಇತರೆ ಯಾವುದೇ ರೀತಿಯಿಂದ ತಮಗೆ ಸಮಸ್ಯೆ ಎದುರಾದರೆ ಅವರ ಸಮಸ್ಯೆ ನಿವಾರಿಸುವುದರ ಜೊತೆಗೆ ಹಿರಿಯರ ರಕ್ಷಣೆಗೆ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸಿ ನ್ಯಾಯ ಒದಗಿಸುತ್ತದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆ ಮತ್ತು ಸಂಘಗಳ ಸಂಯುಕ್ತ ಆಶ್ರಯದಲ್ಲಿ `ವಿಶ್ವ ಹಿರಿಯ ನಾಗರಿಕರ ದಿನಾಚರಣೆ–2025’ರ ಪ್ರಯುಕ್ತ ಜಿಲ್ಲಾ ಮಟ್ಟದಲ್ಲಿ ಹಿರಿಯ ನಾಗರಿಕರಿಗೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಿರಿಯರಿಗಾಗಿ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೊ. ಕೆ.ಎಚ್. ಬೇಲೂರ ಮಾತನಾಡಿ, ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಹಿರಿಯರು ಮುಂದಾಗಬೇಕು. ನಿವೃತ್ತಿಯ ಜೀವನ ಸದಾ ನೆಮ್ಮದಿಯಿಂದ ಕೂಡಿರಬೇಕೆಂದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಕೆ. ಮಹಾಂತೇಶ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯ ಯೋಜನೆಗಳ ಕುರಿತು ವಿವರಿಸಿದರು.
ನಿವೃತ್ತ ಶಿಕ್ಷಕ ಸಜ್ಜನರ ಪ್ರಾರ್ಥಿಸಿದರು. ನಂತರ ಜರುಗಿದ ಹಿರಿಯ ನಾಗರಿಕರ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡ್ರ ಉದ್ಘಾಟಿಸಿ ಕ್ರೀಡೆಗಳಿಗೆ ಚಾಲನೆ ನೀಡಿದರು. ಎಂ.ಸಿ. ಒಗ್ಗಿ ಕಾರ್ಯಕ್ರಮ ನಿರೂಪಿಸಿದರು. ಆರ್.ಟಿ. ನಾರಾಯಣಪುರ ವಂದಿಸಿದರು. ಖಂಡೆಪ್ಪಗೌಡ್ರ, ಜಿ.ಎಸ್. ಹಿರೇಮಠ, ಮಾಲಗಿತ್ತಿಮಠ, ಪ್ರಕಾಶ ಉಪನಾಳ ಸೇರಿದಂತೆ ಹಿರಿಯ ನಾಗರಿಕರು ಹಾಜರಿದ್ದರು.
ಸಮಾಜದಲ್ಲಿ ಯಾವಾಗಲೂ ಹಿರಿಯನ್ನು ಗೌರವಿಸುವ ಕಾರ್ಯ ನಡೆಯಬೇಕು. ಹಿರಿಯರಲ್ಲಿ ನಾವು ದೇವರನ್ನು ಕಾಣಬೇಕು. ಹಿರಿಯ ಜೀವಿಗಳು ವೃದ್ಧಾಶ್ರಮದಲ್ಲಿ ಇರುವಂತಾಗಬಾರದು. ಈ ಕುರಿತು ಗಂಭೀರ ಚಿಂತನೆಯಾಗಬೇಕೆಂದು ಹೇಳಿದರು. ಹಿರಿಯ ನಾಗರಿಕರಿಗಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೂಕ್ತವಾಗಿದೆ ಎಂದು ಸಿ.ಎಸ್. ಶಿವನಗೌಡ್ರ ಶುಭ ಹಾರೈಸಿದರು.