- ಇಂತಹ ಹೇಳಿಕೆಯಿಂದ ರೈತರು, ಜನರಲ್ಲಿ ಅನಾವಶ್ಯಕ ಆತಂಕ ಸೃಷ್ಟಿ
- ತಜ್ಞರ ವರದಿ ಬಳಿಕವೂ ಈ ಬಗ್ಗೆ ಮಾತನಾಡುವುದು ಸರಿಯಲ್ಲ
ವಿಜಯಸಾಕ್ಷಿ ಸುದ್ದಿ, ಮೈಸೂರು
ಕೆಆರ್ಎಸ್ ಡ್ಯಾಂ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಸಂಸದೆ ಸುಮಲತಾ ನಡೆಯ ವಿರುದ್ಧ ಕಂದಾಯ ಸಚಿವ ಆರ್.ಅಶೋಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ, ಕೆಆರ್ಎಸ್ ಡ್ಯಾಂ ಮುಖ್ಯ. ಡ್ಯಾಂ ಸುರಕ್ಷತೆ ಬಗ್ಗೆ ಸರ್ಕಾರ ವರದಿ ಕೇಳಿತ್ತು. ಅಲ್ಲಿನ ಅಧಿಕಾರಿ ಬಿರುಕು ಇಲ್ಲ ಅಂತ ವರದಿ ಕೊಟ್ಟಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿಗಳು, ನಾನು, ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದೇವೆ. ಇಷ್ಟಾದ ಮೇಲೂ ಪದೇ ಪದೇ ಬಿರುಕು ಇದೆ ಅನ್ನೋದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದಾಗಿ ಅಣೆಕಟ್ಟೆಯ ತಳಭಾಗದಲ್ಲಿರುವ ಜನರು ಮತ್ತು ರೈತರಿಗೆ ಅನಾವಶ್ಯಕ ಆತಂಕ ಉಂಟಾಗುತ್ತದೆ.
ಇಷ್ಟೆಲ್ಲ ಆಗುತ್ತಿರುವಾಗ ಸರ್ಕಾರವೂ ಸುಮ್ಮನಿರಲು ಸಾಧ್ಯವಿಲ್ಲ. ನಾನೂ ಇಂದು ಮಂಡ್ಯಕ್ಕೆ ಹೋಗುತ್ತಿದ್ದೇನೆ, ಜಿಲ್ಲಾಧಿಕಾರಿ ಭೇಟಿ ಮಾಡುತ್ತೇನೆ. ಕೆಆರ್ಎಸ್ ಡ್ಯಾಂ, ಬೇಬಿ ಬೆಟ್ಟದ ಸುತ್ತ ಏನಾಗಿದೆ ಎಂದು ವರದಿ ನೀಡುವಂತೆ ಡಿಸಿಗೆ ಸೂಚನೆ ಕೊಡುತ್ತೇನೆ ಎಂದು ಹೇಳಿದರು.