ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ನಡೆದಿದೆ. ಇಂದು ದರ್ಶನ್, ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದು ಈ ವೇಳೆ ದರ್ಶನ್ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ್ರೆ ಉಳಿದ ಆರೋಪಿಗಳಾದ ಪುಟ್ಟಸ್ವಾಮಿ, ರಾಘವೇಂದ್ರ, ಧನರಾಜ್, ವಿನಯ್ ಕಾರ್ತಿಕ್, ಕೇಶವ ಮೂರ್ತಿ, ನಿಖಿಲ್ ನಾಯಕ್ ಖುದ್ದು ಕೋರ್ಟ್ಗೆ ಹಾಜರಾಗಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ನಂದೀಶ್ ವಿಚಾರಣೆಗೆ ಗೈರಾಗಿದ್ದನು. ಈ ವೇಳೆ ದರ್ಶನ್ ಪರ ವಕೀಲರು ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ವಾದಿಸಿದರು.
ದರ್ಶನ್ ಪರ ವಕೀಲ ಸುನೀಲ್ ವಾದ ಮಂಡಿಸಿದರು. ‘ದರ್ಶನ್ ಅವರನ್ನು ಇನ್ನೂ ಕ್ವಾರಂಟೈನ್ನಲ್ಲಿ ಇಟ್ಟಿದ್ದಾರೆ. ಜೈಲಿನ ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ಜೈಲಿನಲ್ಲಿರುವ ಆರೋಪಿಗಳಿಗೆ ಕೆಲ ಸಮಸ್ಯೆಗಳಿವೆ’ ಎಂದಿರುವ ವಕೀಲರು, ಆರೋಪಿಗಳ ಸಮಸ್ಯೆ ಬಗ್ಗೆ ಆಲಿಸುವಂತೆ ಕೋರ್ಟ್ಗೆ ಮನವಿ ಮಾಡಿದ್ದಾರೆ. ಕ್ವಾರಂಟೈನ್ ಸೆಲ್ನಿಂದ ಸಾಮಾನ್ಯ ಸೆಲ್ಗೆ ಆರೋಪಿಗಳನ್ನು ಶಿಫ್ಟ್ ಮಾಡುವಂತೆ ಇತರೆ ಆರೋಪಿಗಳ ಪರ ವಕೀಲರು ಮನವಿ ಸಲ್ಲಿಸಿದ್ದಾರೆ.
ವಿಚಾರಣೆ ವೇಳೆ ದರ್ಶನ್ಗೆ ಜಡ್ಜ್ ಪ್ರಶ್ನೆ ಕೇಳಿದ್ದಾರೆ. ‘ಕೋರ್ಟ್ ಆದೇಶ ಪಾಲಿಸುತ್ತಿದ್ದಾರೆಯೇ?’ ಎಂದು ಕೇಳಿದ ಪ್ರಶ್ನೆಗೆ, ‘ಇಲ್ಲ ಸರ್, ಯಾವ ಆದೇಶಗಳನ್ನೂ ಪಾಲಿಸುತ್ತಿಲ್ಲ. 25/3 ಫೀಟ್ ಮಾತ್ರ ಓಡಾಡಲು ಅವಕಾಶ ಕೊಟ್ಟಿದ್ದಾರೆ. ಅಲ್ಲಿ ವಾಕಿಂಗ್ ಮಾಡಲು ಸೂರ್ಯನ ಬೆಳಕು ಬರುವುದಿಲ್ಲ’ ಎಂದು ದರ್ಶನ್ ಉತ್ತರ ನೀಡಿದ್ದಾರೆ.
ಜೈಲು ಅಧಿಕಾರಿಗಳ ವಿರುದ್ದ ದರ್ಶನ್ ಪರ ವಕೀಲರು ಆರೋಪ ಮಾಡಿದ್ದಾರೆ. ‘20 ಬಾರಿ ಕೋರ್ಟ್ ಆರ್ಡರ್ ಕೇಳುತ್ತಾರೆ. ಗುಂಡಾ ರಾಜ್ಯವೇ ಇದು? ಕೋರ್ಟ್ ಆರ್ಡರ್ಗೂ ಮಾನ್ಯತೆ ನೀಡುತ್ತಿಲ್ಲ’ ಎಂದು ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದಾರೆ. ಜೈಲಿನ ಸೂಪರಿಂಟೆಂಡೆಂಟ್ ಹಾಜರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಅಕ್ಟೋಬರ್ 9ಕ್ಕೆ ವಿಚಾರಣೆ ಮುಂದೂಡಲಾಗಿದೆ.