ಬೆಂಗಳೂರು: ಬೆಂಗಳೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಅಪ್ರಾಪ್ತ ಮಗಳೇ ತನ್ನ ಸ್ನೇಹಿತರ ಜೊತೆಗೂಡಿ ಹೆತ್ತ ತಾಯಿಯನ್ನು ಕೊಲೆ ಮಾಡಿದ್ದಾಳೆ. ಉಸಿರುಗಟ್ಟಿಸಿ ಕೊಂದು, ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ, ಈ ಘೋರ ಕೃತ್ಯವು ಸಮಾಜವನ್ನೇ ಬೆಚ್ಚಿಬೀಳಿಸಿದೆ. ಐವರು ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದ್ದು, ನೇತ್ರಾವತಿ (35) ಕೊಲೆಯಾದ ಮಹಿಳೆಯಾಗಿದ್ದಾರೆ.
ಲೋನ್ ರಿಕವರಿ ಕಂಪನಿಯಲ್ಲಿ ಸಹಾಯಕಿಯಾಗಿ ನೇತ್ರಾವತಿ ಕೆಲಸ ಮಾಡುತ್ತಿದ್ದರು. ಸ್ನೇಹಿತರ ಜೊತೆ ಸೇರಿಕೊಂಡು ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿ ಮಗಳು ಹತ್ಯೆ ಮಾಡಿದ್ದಾಳೆ. ಕೃತ್ಯದಲ್ಲಿ ಐವರು ಅಪ್ರಾಪ್ತರು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಅ.25 ರಂದು ಘಟನೆ ನಡೆದಿದೆ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಸಿಕೊಂಡಿದ್ದರು. ನಂತರ ಮೃತಳ ಅಕ್ಕ ಅನಿತಾಗೆ ಮಗಳ ಮೇಲೆ ಅನುಮಾನ ವ್ಯಕ್ತವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ತಂಗಿ ಸಾವಿನ ಬಳಿಕ ಮಗಳು ಎಲ್ಲೂ ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ಎರಡು ದಿನಗಳ ಬಳಿಕ ಮಗಳು ವಾಪಸ್ ಮನೆಗೆ ಬಂದಿದ್ದಳು.
ನಾನು ಅವತ್ತು ತಾಯಿ ಮನೆಗೆ ಹೋಗಿದ್ದೆ. ಐದು ಜನ ಸ್ನೇಹಿತರನ್ನ ಗಮನಿಸಿದೆ. ಟವಲ್ನಲ್ಲಿ ಕುತ್ತಿಗೆ ಬಿಗಿದು ನೇಣುಹಾಕಿದ್ದನ್ನು ನೋಡಿದೆ. ನಂತರ ನನ್ನ ಮೇಲೆ ಬೆದರಿಕೆ ಹಾಕಲಾಗಿತ್ತು. ಭಯಪಟ್ಟು ಪ್ರೆಂಡ್ಸ್ ಮನೆಗೆ ತೆರಳಿದ್ದೆ ಎಂದು ಮೃತ ನೇತ್ರಾವತಿ ಮಗಳು ತಿಳಿಸಿದ್ದಳು.
ಈ ಬಗ್ಗೆ ಅನಮಾನ ವ್ಯಕ್ತವಾದ ಹಿನ್ನಲೆ ಮೃತ ಮಹಿಳೆ ಅಕ್ಕ ದೂರು ನೀಡಿದ್ದರು. ತನಿಖೆಯಲ್ಲಿ ಮಗಳಿಂದ ಕೊಲೆಯಾಗಿದೆ ಎಂಬುದು ಬಯಲಾಗಿದೆ. ಮನೆಗೆ ಸ್ನೇಹಿತರು ಬಂದಿದ್ದಕ್ಕೆ ಪೊಲೀಸರಿಗೆ ಕರೆ ಮಾಡುವುದಾಗಿ ತಾಯಿ ಹೇಳಿದ್ದಳು. ಆಗ ಪುತ್ರಿ ಸ್ನೇಹಿತರೊಟ್ಟಿಗೆ ಸೇರಿಕೊಂಡು ತಾಯಿಯ ಹತ್ಯೆ ಮಾಡಿದ್ದಾಳೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



