ಮಡಿಕೇರಿ:- ಬಿಹಾರದಲ್ಲಿ ಗೆಲ್ಲಲು ಎನ್ಡಿಎ ಹಣದ ಹೊಳೆಯೇ ಹರಿಸಿದೆ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಾಗ್ದಾಳಿ ಮಾಡಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶಗಳ ಕುರಿತು ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಆಗುವವರೆಗೂ ರಾಜಕೀಯ ಮಾತುಗಳನ್ನು ಆಡಬಹುದು, ಫಲಿತಾಂಶ ಬಂದಾಗ ಜನರ ಅಭಿಪ್ರಾಯಕ್ಕೆ ತಲೆಬಾಗಬೇಕಾಗುತ್ತದೆ. ಜನರ ತೀರ್ಪುನ್ನು ಸ್ವೀಕಾರ ಮಾಡಬೇಕು. ಆದ್ರೆ ಈ ಚುನಾವಣೆಯಲ್ಲಿ ಎನ್ಡಿಎ ಹಣದ ಹೊಳೆಯನ್ನೇ ಹರಿಸಿದೆ ಎಂದು ಕಿಡಿ ಕಾರಿದರು.
ಚುನಾವಣೆ ಘೋಷಣೆಗೂ ಮುನ್ನವೇ ಪ್ರತಿ ಮಹಿಳೆಯರ ಖಾತೆಗೆ 10,000 ರೂ. ನೇರವಾಗಿ ವರ್ಗಾವಣೆ ಮಾಡಿದ್ದಾರೆ. ಇದು ಚುನಾವಣಾ ಭ್ರಷ್ಟಾಚಾರ. ದುಡ್ಡು ಕೊಟ್ಟು ಜನರ ಮತವನ್ನ ಖರೀದಿ ಮಾಡಿದ್ದಾರೆ. ಚುನಾವಣಾ ಭ್ರಷ್ಟಾಚಾರದ ಮೂಲಕ ರಾಜಕೀಯ ವ್ಯವಸ್ತೆಯನ್ನ ಹದಗೆಡಿಸಿದ್ದಾರೆ. ಹೀಗೆ ಭ್ರಷ್ಟಾಚಾರಕ್ಕೆ ಎಲ್ಲಿಯವರೆಗೆ ಮತದಾರರು ಬಲಿಯಾಗುತ್ತಾರೋ, ಅಲ್ಲಿಯವರೆಗೆ ನಾವು ಅಪಾಯದಲ್ಲಿರುತ್ತೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ದೆಹಲಿ ಏನಾಗುತ್ತದೆ, ಚುನಾವಣಾ ಆಯೋಗದಲ್ಲಿ ಏನಾಗುತ್ತದೆ ಅನ್ನೋದ್ರ ಬಗ್ಗೆ ಕೇಂದ್ರಕ್ಕೆ ಮೊದಲೇ ಮಾಹಿತಿ ಇರುತ್ತದೆ. ನಾಳೆ ಚುನಾವಣೆ ಘೋಷಣೆ ಆಗುತ್ತೆ ಅನ್ನೋದಾದ್ರೆ, ಇವತ್ತೇ ಹಣ ಕೊಡುವ ಕೆಲಸ ಮಾಡ್ತಾರೆ. ಹೀಗಿರುವಾಗ ನಾವು ಚುನಾವಣೆ ಎದುರಿಸೋದು ಹೇಗೆ? ಅಂತ ಪ್ರಶ್ನೆ ಮಾಡಿದ್ದಾರೆ.


