ವಿಜಯಸಾಕ್ಷಿ ಸುದ್ದಿ, ಮೈಸೂರು
ಮಾಜಿ ಪ್ರಧಾನಿ ನೆಹರೂ ಆಸ್ಮಿತೆ, ಭಾರತದ ಗರ್ವದ ಸಂಕೇತ. ಅವರ ಬಗ್ಗೆ ಇಷ್ಟು ಲಘುವಾಗಿ ಮಾತನಾಡುವುದು ಸರಿಯಲ್ಲ. ನಿಮಗೆ ನೆಹರೂ ಬಗ್ಗೆ ಏನೂ ಗೊತ್ತಿದೆ ? ಎಂದು ತಮ್ಮದೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಬಿಜೆಪಿ ಎಂಎಲ್ ಸಿ ಎಚ್. ವಿಶ್ವನಾಥ್ ಗುಡುಗಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ನೆಹರೂ ಅಧಿಕಾರದ ಅವಧಿಗಿಂತ ಹೆಚ್ಚಿನ ಅವಧಿ ಜೈಲಲ್ಲಿ ಕಳೆದವರು.
ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ಸಿ.ಟಿ. ರವಿ ನೆಹರೂ ಬಗ್ಗೆ ಓದಿಕೊಂಡು ಮಾತನಾಡಲಿ. ಸಿ.ಟಿ. ರವಿಗೂ ಮತ್ತು ಬಿಜೆಪಿಗೂ ಈ ಮಾತು ಶೋಭೆ ತರುವುದಿಲ್ಲ ಎಂದು ತಿಳಿಸಿದರು.
ನೆಹರೂ ಅವರ ತಂದೆ ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಬರೆದು ಕೊಟ್ಟರು. ಸಿ.ಟಿ. ರವಿ ಏನು ಕೊಟ್ಟಿದ್ದಾರೆ. ಐದು ಪೈಸೆಯನ್ನು ದೇಶಕ್ಕೆ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.
ವಾಜಪೇಯಿ ಅವರು ನೆಹರೂ ನಿಧಾನರಾದಾಗ ಏನು ಭಾಷಣ ಮಾಡಿದ್ದರು ಎಂಬುದನ್ನು ಸಿ.ಟಿ. ರವಿ ಓದಿಕೊಳ್ಳಬೇಕು. ನೆಹರೂ ಅವರ ಬಗ್ಗೆ ಚರಿತ್ರಾರ್ಹ ಭಾಷಣ ಮಾಡಿದ್ದಾರೆ. ಇಂತಹ ನೆಹರೂ ಬಗ್ಗೆ ನೀವು ಕೀಳಾಗಿ ಮಾತಾಡುವುದು ತಪ್ಪು.
ಯಾರನ್ನೋ ಓಲೈಸಲು ಈ ರೀತಿ ಮಾತಾಡಬೇಡಿ ಎಂದು ಸಲಹೆ ನೀಡಿದರು. ಕರ್ನಾಟಕದಲ್ಲಿ ಐದು ಜನ ಮಾಜಿ ಸಿಎಂ ಗಳಿದ್ದಾರೆ. ನೀವು ಯಾಕೆ ಇದನ್ನು ಖಂಡಿಸುತ್ತಿಲ್ಲ.?
ನಿಮ್ಮ ಪಕ್ಷದ ನಾಯಕರಿಗೆ ಬಾಯಿ ಮುಚ್ಚಿಕೊಂಡಿರಿ ಎಂದು ಹೇಳುವಷ್ಟು ನೈತಿಕತೆ ಕಳೆದು ಕೊಂಡಿದ್ದೀರಾ ? ರಾಜಕಾರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದೀರಿ ? ಎಂದು ಪ್ರಶ್ನಿಸಿದರು.
ವಾಜಪೇಯಿ ಅವರನ್ನು ಕಾಂಗ್ರೆಸ್ ನಾಯಕರು ಕುಡುಕ ಎಂದಿರುವುದು ಖಂಡನೀಯ. ನೆಹರೂ, ವಾಜಪೇಯಿ ಇಬ್ಬರು ಈ ದೇಶದ ಶ್ರೇಷ್ಠ ಆಡಳಿತಗಾರರು. ಪ್ರಿಯಾಂಕ ಖರ್ಗೆ ತಮ್ಮ ತಂದೆಯನ್ನು ನೋಡಿ ಮಾತಾಡುವುದನ್ನು ಕಲಿಯಲಿ ಎಂದು ಬುದ್ದಿವಾದ ಹೇಳಿದರು.