ವಿಜಯಸಾಕ್ಷಿ ಸುದ್ದಿ, ಗದಗ: ಪೊಲೀಸ್ರಿಗೆ ಮುಗ್ಧ ಜನರನ್ನು ದೈಹಿಕವಾಗಿ ಹಿಂಸಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದಾಗಲೂ ಸಹ ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ ಅವರಿಗೆ ಲಂಬಾಣಿ ರೈತ ಸೋಮಪ್ಪ ಲಮಾಣಿ ಮೇಲೆ ಹಲ್ಲೆ ನಡೆಸಿ ಹಣ ದೋಚಲು ಅಧಿಕಾರ ನೀಡಿದವರು ಯಾರು ಎಂದು ಹಿಂದೂ ಸಂಘಟನೆಗಳ ಧುರೀಣ ರಾಜೂ ಖಾನಪ್ಪನವರ ಪ್ರಶ್ನಿಸಿದರು.
ಶಿರಹಟ್ಟಿ ತಹಸೀಲ್ದಾರ ಕಚೇರಿಯೆದುರು ಕಳೆದ ಐದು ದಿನಗಳಿಂದ ಶಿರಹಟ್ಟಿ ಪಿಎಸ್ಐ ವರ್ಗಾವಣೆಗೆ ಆಗ್ರಹಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ಜಿಲ್ಲೆಯ ಪೊಲೀಸರು ಮುಗ್ಧ ಜನರಿಗೆ ಲಾಠಿಯಿಂದ ಹೊಡೆದು ಹಲ್ಲೆ ನಡೆಸಿ, ಮನಬಂದತೆ ಮಾತನಾಡುವುದು ಫ್ಯಾಶನ್ ಆಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಅವರು ಅದರ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ಬದಲಿಗೆ ದೂರು ನೀಡಿದವರನ್ನೇ ತಪ್ಪಿತಸ್ಥರನ್ನಾಗಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರಿರುವದು ಸಮಾಜದ ಸ್ವಾಸ್ಥ್ಯ ಕಾಪಾಡುವದಕ್ಕಾಗಿಯೇ ಹೊರತು ಮುಗ್ಧ ಜನರನ್ನು ಹಿಂಸಿಸಿ ಸುಳ್ಳು ಪ್ರಕರಣ ದಾಖಲಿಸಿ ಹಣ ದೋಚಲು ಅಲ್ಲವೆಂದು ಅವರು ಹೇಳಿದರು.
ಜಮೀನಿನಿಂದ ಮನೆಗೆ ತೆರಳುತ್ತಿದ್ದ ಮುಗ್ಧ ರೈತ ಸೋಮಪ್ಪ ಲಮಾಣಿ ಮೇಲೆ ಹಲ್ಲೆ ನಡೆಸಿ ಹಣ ವಸೂಲಿ ಮಾಡಿದ ಈರಣ್ಣ ರಿತ್ತಿ ಅವರನ್ನು ಕೂಡಲೇ ಅಮಾನತುಗೋಳಿಸಬೇಕು. ಶಿರಹಟ್ಟಿ ಪೊಲೀಸ್ ಠಾಣೆಗೆ ದಕ್ಷ ಅಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೋಮಪ್ಪ ಲಮಾಣಿ, ಗಂಗವ್ವ ಲಮಾಣಿ, ಸತೀಶ ಕುಂಬಾರ, ಸಂತೋಷ ಕುರಿ, ಪರಶುರಾಮ ಡೊಂಕಹಳ್ಳಿ, ವೆಂಕಟೇಶ ದೊಡ್ಡಮನಿ, ಭರತ್ ಲದ್ದಿ, ಈಶ್ವರ ಕಾಟವಾ, ಶಿವಕುಮಾರ ಲದ್ದಿ, ಪ್ರವೀಣ ಹುಡೇದ, ಬಸವರಾಜ ಬಜಂತ್ರಿ, ಮಂಜುನಾಥ ವಡ್ಡರ, ರವಿ ಬಂಡಿವಡ್ಡರ, ರಮೇಶ ಬೆಂತೂರ, ಆನಂದ ಹುಡೇದ, ಪ್ರವೀಣ ಬೆಟಗೇರಿ ಮುಂತಾದವರಿದ್ದರು.
ಈ ಹಿಂದೆ ಲಕ್ಷ್ಮೇಶ್ವರದಲ್ಲಿ ಪಿಎಸ್ಐ ಆಗಿದ್ದ ಈರಣ್ಣ ರಿತ್ತಿ ಅಲ್ಲಿಯೂ ಸಹ ಹಿಂದೂ ವಿರೋಧಿ, ರೈತ ವಿರೋಧಿ ಕೃತ್ಯವೆಸಗಿದ್ದಾರೆ. ಈ ಅಧಿಕಾರಿಗೆ ಶಿರಹಟ್ಟಿ ತಾಲೂಕ ಹೊರತುಪಡಿಸಿ ಬೇರೆ ಕಡೆ ನೌಕರಿ ಮಾಡಲಾಗುವುದಿಲ್ಲವೇ, ಶಿರಹಟ್ಟಿ ತಾಲೂಕನಲ್ಲಿ ಅಧಿಕಾರಿಗೆ ವಿಶೇಷ ಆಮದನಿ ದೊರೆಯುತ್ತಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ರಾಜೂ ಖಾನಪ್ಪನವರ ಆಗ್ರಹಿಸಿದರು.



