ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸೂರ್ಯ ಜಗತ್ತಿಗೆ ಬೆಳಕು ಕೊಡುವವನಾದರೆ, ವ್ಯಕ್ತಿಯ ಬದುಕೆಂಬ ಜಗತ್ತಿಗೆ ಬೆಳಕು ನೀಡುವವನು ಗುರು. ಗುರುವಿಲ್ಲದೆ ಯಾವ ವ್ಯಕ್ತಿಯೂ ವಿಕಸಿತನಾಗಲಾರ. ಜಗದ ಇಂತಹ ಎಲ್ಲ ಗುರುಗಳ ಮಹಾಗುರು ಶ್ರೀ ಗುರು ದತ್ತಾತ್ರೇಯನಾಗಿದ್ದಾನೆ ಎಂದು ಸಾಹಿತಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಬ್ರಹ್ಮ ಸಮಾಜದವರು ಆಚರಿಸಿದ ಶ್ರೀ ಗುರು ದತ್ತನ ತೊಟ್ಟಿಲೋತ್ಸವದಲ್ಲಿ ಅವರು ದತ್ತಾತ್ರೇಯನ ಜನ್ಮ ವೃತ್ತಾಂತದ ಬಗ್ಗೆ ಮಾತನಾಡಿದರು.
ನಾಥ ಸಂಪ್ರದಾಯದ ಮೊದಲ ಗುರು ಶ್ರೀದತ್ತ. ದತ್ತನ ಬಳಿಯಿರುವ ಆಕಳು ಇಡೀ ಪೃಥ್ವಿಯ ಸಂಕೇತವಾದರೆ, ನಾಲ್ಕು ನಾಯಿಗಳು ನಾಲ್ಕು ವೇದಗಳನ್ನು ಸಂಕೇತಿಸುತ್ತವೆ. ದತ್ತನನ್ನು ಅನನ್ಯ ಭಕ್ತಿಯಿಂದ ಪೂಜಿಸುವವರಿಗೆ ಸುಲಭದಲ್ಲಿ ಒಲಿಯುತ್ತಾನೆ. ಅವನ ಪ್ರಸನ್ನತೆಯಿಂದ ಮನೋ ಕ್ಲೇಶ ದೂರಾಗಿ ಜಾಣ್ಮೆ, ಆಧ್ಯಾತ್ಮಿಕ ಮನೋಭಾವ ಬೆಳೆಯುತ್ತದೆ. ಋಣಾತ್ಮ ಶಕ್ತಿಯ ದೂರೀಕರಣ, ಸಂಪತ್ತಿನ ಕ್ರೋಢೀಕರಣ, ದುಷ್ಟ ಶಕ್ತಿಗಳ ಸಂಹಾರವಾಗುತ್ತದೆ. ಆದ್ದರಿಂದ ಶ್ರೀ ಗುರು ದತ್ತಾತ್ರೇಯನನ್ನು ನಿತ್ಯವೂ ಭಕ್ತಿಯಿಂದ ಭಜಿಸಬೇಕೆಂದು ತಿಳಿಸಿದರು.
ತೊಟ್ಟಿಲೋತ್ಸವದ ನೇತೃತ್ವವನ್ನು ವಹಿಸಿಕೊಂಡು ಪೂಜಾ ವಿಧಿಗಳನ್ನು ಶ್ರೀವಲ್ಲಭಭಟ್ಟ ಸದರಜೋಷಿ ನೆರವೇರಿಸಿದರು. ಸುಮಂಗಲೆಯರು ಶ್ರೀ ಗುರು ದತ್ತಾತ್ರೇಯರನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿದರು. ಈ ವೇಳೆ ಶ್ರೀ ದತ್ತಭಕ್ತ ಮಂಡಳಿ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ, ಎ.ಜಿ. ಕುಲಕರ್ಣಿ, ಕೆ.ಬಿ. ದೇಸಾಯಿ, ಎಸ್.ಎಚ್. ಕುಲಕರ್ಣಿ, ಜಗನ್ನಾಥ ಸೂರಭಟ್ಟನವರ, ಪ್ರಶಾಂತ ಗ್ರಾಮಪುರೋಹಿತ, ದತ್ತಣ್ಣ ಕುಲಕರ್ಣಿ, ಆದರ್ಶ ಕುಲಕರ್ಣಿ, ಅಜಿತ ಕುಲಕರ್ಣಿ, ಭಾರತಿಬಾಯಿ ಗ್ರಾಮಪುರೋಹಿತ, ಶೋಭಾ ಕುಲಕರ್ಣಿ, ಸನ್ಮತಿ ಸದರಜೋಷಿ, ನಿಖಿತಾ ಗ್ರಾಮಪುರೋಹಿತ, ವೀಣಾ ಕುಲಕರ್ಣಿ, ದೀಪಾ ಕುಲಕರ್ಣಿ, ಜ್ಯೋತಿ ನಾಡಿಗೇರ, ಪಲ್ಲವಿ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ರಾಜಶ್ರೀ ಕುಲಕರ್ಣಿ, ಸೀಮಾ ಕೊಂಡಿ, ಲಕ್ಷ್ಮೀ ಗ್ರಾಮಪುರೋಹಿತ, ಜಯಶ್ರೀ ಗ್ರಾಮಪುರೋಹಿತ, ರೂಪಾ ಗ್ರಾಮಪುರೋಹಿತ, ಪ್ರತೀಕ್ಷಾ ಕುಲಕರ್ಣಿ ಇನ್ನಿತರರಿದ್ದರು.
ಅತ್ರಿ ಮುನಿ ಮತ್ತು ಸತಿ ಅನಸೂಯರ ಪುತ್ರನಾಗಿ, ಮೂರು ಮುಖದ ಮಗುವಾಗಿ ಶ್ರೀ ದತ್ತಾತ್ರೇಯರು ಅವತಾರ ತಾಳಿದರು. ಬ್ರಹ್ಮ, ವಿಷ್ಣು, ಮಹೇಶ್ವರರ ತ್ರಿವೇಣಿ ಸಂಗಮವೇ ಶ್ರೀ ಗುರು ದತ್ತಾತ್ರೇಯರು. ಅನಸೂಯಳ ಪಾತಿವೃತ್ಯವನ್ನು ಪರೀಕ್ಷಿಸಬಂದ ಈ ತ್ರಿಮೂರ್ತಿಗಳು ಅವಳ ಪಾತಿವೃತ್ಯದ ಶಕ್ತಿಯನ್ನು ಕಣ್ಣಾರೆ ಕಂಡು ಅವಳಿಗೆ ಮಗುವಾದರು. ಈ ಮೂರು ಮುಖಗಳು ಸೃಷ್ಟಿ, ಸ್ಥಿತಿ, ಲಯವನ್ನು ಸಂಕೇತಿಸುತ್ತವೆ. ಬೇಡಿದವರಿಗೆ ಬೇಡಿದ್ದನ್ನು ಅತ್ಯಂತ ಶೀಘ್ರದಲ್ಲಿ ನೀಡುವ ಗುರು ಇವರಾಗಿದ್ದಾರೆ ಎಂದು ಅರುಣ ಕುಲಕರ್ಣಿ ತಿಳಿಸಿದರು.



