ಶಿವರಾಜ್ಕುಮಾರ್ ಅವರ ‘ಜೋಗಿ’, ಪ್ರೇಮ್ ನಟನೆ ಮತ್ತು ನಿರ್ದೇಶನದ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಸೇರಿದಂತೆ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಈಗ ತಮ್ಮ ಪುತ್ರ ಅರುಣ್ ರಾಮ್ಪ್ರಸಾದ್ರನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ‘ಘಾರ್ಗ’ ಎಂಬ ಶೀರ್ಷಿಕೆಯ ಈ ಸಿನಿಮಾದ ‘ನೀನು ನನಗೆ’ ರೊಮ್ಯಾಂಟಿಕ್ ಹಾಡಿನ ಬಿಡುಗಡೆ ಇತ್ತೀಚೆಗಷ್ಟೇ ನಡೆದಿತ್ತು.
ಅಡ್ವೆಂಚರ್ ಡ್ರಾಮಾ ಕಥಾನಕವಿರುವ ಈ ಚಿತ್ರದಲ್ಲಿ ಅರುಣ್ ಒಬ್ಬ ರೈಟರ್ ಹಾಗೂ ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಂ. ಶಶಿಧರ್ ಕಥೆ–ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ‘ಘಾರ್ಗ’ ಒಂದು ಊರಿನ ಹೆಸರು. ನಾಯಕಿಯಾಗಿ ರೆಹಾನ ಅಭಿನಯಿಸಿದ್ದಾರೆ.
ಚಿತ್ರ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕ ರಾಮ್ ಪ್ರಸಾದ್ ಮಾತನಾಡಿ, “ನಾನು 40 ವರ್ಷಗಳಿಂದ ಆಡಿಯೋ ಕಂಪನಿ ಮಾಲೀಕ ಹಾಗೂ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ನನ್ನ ಮಗನನ್ನು ಲಾಂಚ್ ಮಾಡುವುದು ನನಗೆ ಸಂತೋಷ. ಚಿತ್ರವನ್ನು ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ್ದೇವೆ. ಕೆಲವು ಕಾರಣಗಳಿಂದ ವಿಳಂಬವಾಯಿತು. ನಾಯಕ ಮೂರು ವಿಭಿನ್ನ ಗೆಟಪ್ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿಕ್ಕಮಗಳೂರಿನಲ್ಲಿ ಸೆಟ್ ಹಾಕಿದ್ದಾಗ ಬೆಂಕಿ ಅವಘಡವೂ ಎದುರಾಯಿತು. ನಿರ್ದೇಶಕರು ಕಥೆಯನ್ನು ಅದ್ಭುತವಾಗಿ ಸಂಗ್ರಹಿಸಿದ್ದಾರೆ. ಈಗ ಚಿತ್ರ ಸೆನ್ಸಾರ್ಗೆ ಸಿದ್ಧವಾಗಿದೆ. ಜನವರಿಯಲ್ಲಿ ರಿಲೀಸ್ ಮಾಡುವ ಉದ್ದೇಶವಿದೆ. ಎನ್. ಕುಮಾರ್ ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ,” ಎಂದು ಹೇಳಿದರು.
ನಿರ್ದೇಶಕ ಎಂ. ಶಶಿಧರ್ ಮಾತನಾಡಿದ್ದು ಹೀಗೆ: “ಚಿತ್ರವನ್ನು 5 ವರ್ಷಗಳ ಹಿಂದೆ ಪ್ರಾರಂಭಿಸಿದ್ದೇವೆ. ಕೋವಿಡ್ ಸೇರಿದಂತೆ ಹಲವು ಕಾರಣಗಳಿಂದ ವಿಳಂಬವಾಯಿತು. ಅಡ್ವೆಂಚರ್ ಡ್ರಾಮಾದಲ್ಲಿ ಫಿಕ್ಷನಲ್ ಕಥೆಯನ್ನು ಹೇಳಲಾಗಿದ್ದು, ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್—all in one ಮನರಂಜನೆ ಇದೆ. ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಟ್ರೈಲರ್ ನೋಡಿ ಜೀ ಸಂಸ್ಥೆಯವರು ಉತ್ತಮ ದರಕ್ಕೆ ರೈಟ್ಸ್ ಖರೀದಿಸಿದ್ದಾರೆ. ‘The Land of Shadow’ ಈ ಚಿತ್ರದ ಟ್ಯಾಗ್ಲೈನ್,” ಎಂದು ಹೇಳಿದರು.
ನಾಯಕ ಅರುಣ್ ರಾಮ್ಪ್ರಸಾದ್ ತಮ್ಮ ಅನುಭವ ಹಂಚಿಕೊಳ್ಳುತ್ತಾ, “ನಟನೆಗೆ ಬೇಕಾದ ಎಲ್ಲಾ ತರಬೇತಿ ಪಡೆದು ಚಿತ್ರರಂಗಕ್ಕೆ ಹೆಜ್ಜೆಯಿಟ್ಟಿದ್ದೇನೆ. ಪಾತ್ರಕ್ಕಾಗಿ ತೂಕ ಹೆಚ್ಚಿಸುವುದು–ಕಡಿಮೆ ಮಾಡುವುದು ಸೇರಿದಂತೆ ಹಲವು ಚಾಲೆಂಜ್ಗಳು ಇವೆ. ರೈಟರ್, ಅಂಡರ್ವರ್ಲ್ಡ್ ಸೇರಿದಂತೆ ಹಲವು ಶೇಡ್ಸ್ನ ಪಾತ್ರ ಮಾಡಿದ್ದೇನೆ. ಹಾರರ್–ಕ್ರೈಮ್ ಥ್ರಿಲ್ಲರ್ ಅಂಶಗಳಿರುವ ಸಿನಿಮಾ ಇದು. ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಸಂಪೂರ್ಣವಾಗಿ ಮುಗಿದಿದೆ,” ಎಂದು ಹೇಳಿದರು.
ವಿತರಕ ಎನ್. ಕುಮಾರ್ ಮಾತನಾಡಿ, “ರಾಮ್ ಪ್ರಸಾದ್ ನನ್ನ ಆತ್ಮೀಯ ಸ್ನೇಹಿತರು. ಅವರ ಮಗ ಮತ್ತು ನನ್ನ ಮಗರೂ ಸ್ನೇಹಿತರು. ಚಿತ್ರವನ್ನು ಫೆಬ್ರವರಿಯಲ್ಲಿ ರಿಲೀಸ್ ಮಾಡುವ ಯೋಜನೆ ಇದೆ,” ಎಂದರು.



