ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದಿಂದ ಹರ್ತಿ ಸಂಪರ್ಕಿಸುವ ನಮ್ಮ ಹೊಲ ನಮ್ಮ ರಸ್ತೆಯ ಮಾರ್ಗವಾಗಿ ಟಿಪ್ಪರ್ ಹಾಗೂ ಪವನ ವಿದ್ಯುತ್ ಕಂಪನಿಗೆ ಸೇರಿದ ಭಾರೀ ಗಾತ್ರದ ವಾಹನಗಳು ಓವರ್ ಲೋಡ್ ತುಂಬಿಕೊಂಡು ಸಂಚರಿಸುವುದರಿಂದ ರಸ್ತೆಗೆ ಹಾಕಿದ ಡಾಂಬರ್ ಕಿತ್ತು ಹದಗೆಟ್ಟು ಹೋಗಿದ್ದು, ರೈತರು ಇಂತಹ ವಾಹನಗಳನ್ನ ತಡೆದು ವಿದ್ಯುತ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಮಾರ್ಗದ ಅಕ್ಕ-ಪಕ್ಕದ ಜಮೀನುಗಳಲ್ಲಿ ಪವನ ವಿದ್ಯುತ್ ಫ್ಯಾನ್ ಅಳವಡಿಸಲು ಪವನ ವಿದ್ಯುತ್ ಕಂಪನಿಗೆ ಸೇರಿದ ಭಾರೀ ಗಾತ್ರದ ವಾಹನಗಳು ಹಗಲು-ರಾತ್ರಿಯೆನ್ನದೇ ಸಂಚರಿಸಿದ್ದರಿಂದ ರಸ್ತೆಗೆ ಹಾಕಿದ ಡಾಂಬರ್ ಕಿತ್ತುಹೋಗಿ, ತಗ್ಗು-ಗುಂಡಿಗಳು ಬಿದ್ದು ರಸ್ತೆಯೂದ್ದಕ್ಕೂ ರಸ್ತೆಗೆ ಹಾಕಿದ್ದ ಜಲ್ಲಿಕಲ್ಲುಗಳು ಹರಡಿಕೊಂಡಿದೆ. ಎತ್ತು, ದನಕರುಗಳು ಈ ಮಾರ್ಗದಲ್ಲಿ ನಡೆದುಕೊಂಡು ಹೋಗಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ರೈತರು, ದನಕರುಗಳು ಸಂಚರಿಸುವುದಕ್ಕೆ ರಸ್ತೆ ನಿರ್ಮಾಣ ಮಾಡಿದ್ದು, ಈ ನಮ್ಮ ಹೊಲ ನಮ್ಮ ರಸ್ತೆಯ ಸಾಮರ್ಥ್ಯ ಮೀರಿದ ಭಾರವನ್ನು ತುಂಬಿಕೊಂಡು ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ಸಂಚರಿಸಲು ಇವರಿಗೆ ಯಾರು ಪರವಾನಿಗೆ ಕೊಟ್ಟಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಈ ಮಾರ್ಗದಲ್ಲಿ ಭಾರೀ ಗಾತ್ರದ ವಾಹನಗಳು ಸಂಚರಿಸಲು ನಾವು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ರೈತರಾದ ಮಂಜುನಾಥ ಬಾತಾಖಾನಿ, ಜಗದೀಶ ಬಟ್ಟೂರ, ಸಂಗಮೇಶ ಮಟ್ಟಿ, ಗಂಗಾಧರ ಬಂದಕ್ಕನವರ, ಯಲ್ಲಪ್ಪ ಕಾಗಿ, ವಿರೂಪಾಕ್ಷಪ್ಪ ಕಣವಿ, ಮಲ್ಲಪ್ಪ ಭದ್ರಣ್ಣವರ ಸೇರಿದಂತೆ ಕಣವಿ, ಮುಳಗುಂದದ ರೈತರು ಇದ್ದರು.



