ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ
ಹಣಕಾಸಿನ ವ್ಯವಹಾರ ಹಾಗೂ ತಾಯಿಯನ್ನು ಕೊಲೆಗೈದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಣ್ಣನನ್ನೇ ಸಹೋದರ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ.
ಕುರಿ ಶಿವಪ್ಪ (40) ಹತ್ಯೆಯಾದ ವ್ಯಕ್ತಿ. ಕುರಿ ಪಕ್ಕೀರಸ್ವಾಮಿ(35) ಕೊಲೆ ಮಾಡಿದ ಆರೋಪಿ.
ಘಟನೆಯ ವಿವರ
ಕೊಲೆಯಾದ ಶಿವಪ್ಪ 8 ವರ್ಷಗಳ ಹಿಂದೆ ತಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದ. ಜೈಲಿನಿಂದ ಬಂದಾಗಿನಿಂದ ತಮ್ಮ ಪಕ್ಕೀರಸ್ವಾಮಿ ಜೊತೆಗೆ ಹಣಕಾಸಿನ ವಿಚಾರಕ್ಕೆ ಪದೇ ಪದೆ ಜಗಳ ತೆಗೆಯುತ್ತಿದ್ದನಲ್ಲದೆ, ಕೊಲೆ ಬೆದರಿಕೆ ಹಾಕುತ್ತಿದ್ದ.
ಇದರಿಂದ ತೀವ್ರವಾಗಿ ನೊಂದಿದ್ದ ಫಕೀರಸ್ವಾಮಿ ಗುರುವಾರ ಬೆಳಿಗ್ಗೆ ಅಣ್ಣನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ತಲೆ, ಕೈಗೆ ಬಿದ್ದ ಬಲವಾದ ಏಟಿಗೆ ಶಿವಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ರಮೇಶ್ ಕುಲಕರ್ಣಿ, ಹಿರೇಹಡಗಲಿ ಪಿಎಸ್ಐ ದಾದಾವಲಿ ಕೆ.ಎಚ್, ಸಿಬ್ಬಂದಿ ಅಂಜಿನಪ್ಪ ಮಾಗಳ, ಕಲ್ಲೇಶ್ ಗೌಡ, ಹಾಲೇಶ, ಮಾಬು ಸ್ಥಳ ಮಹಜರು ನಡೆಸಿ, ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.