HomeCrime Newsವೃದ್ಧ ದಂಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೊಲೆ ಅಲ್ಲ, ಪತ್ನಿಯ ಸಾವಿಗೆ ನೊಂದು ಪತಿ...

ವೃದ್ಧ ದಂಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೊಲೆ ಅಲ್ಲ, ಪತ್ನಿಯ ಸಾವಿಗೆ ನೊಂದು ಪತಿ ಆತ್ಮಹತ್ಯೆ

For Dai;y Updates Join Our whatsapp Group

Spread the love

ಬೆಂಗಳೂರು: ಸಂಪಿಗೆಹಳ್ಳಿಯಲ್ಲಿ ವೃದ್ಧ ದಂಪತಿ ಮೃತದೇಹಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಆರಂಭದಲ್ಲಿ ಕೊಲೆ-ಆತ್ಮಹತ್ಯೆ ಎಂದು ಶಂಕಿಸಲಾಗಿದ್ದ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವರದಿ ಹೊಸ ಸತ್ಯವನ್ನು ಬಹಿರಂಗಪಡಿಸಿದೆ.

ವೈದ್ಯಕೀಯ ವರದಿ ಪ್ರಕಾರ, 77 ವರ್ಷದ ಸುಮಿತ್ರಾ ಪ್ರಸಾದ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಪತ್ನಿಯ ಸಾವಿನ ಆಘಾತವನ್ನು ತಾಳಲಾರದೆ 83 ವರ್ಷದ ಪತಿ ಶಿವಾನಂದಂ ಪ್ರಸಾದ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೃಢಪಟ್ಟಿದೆ.

ಸಂಪಿಗೆಹಳ್ಳಿಯ ನಿವಾಸದಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾದ ಬಳಿಕ, ಅವರ ಪುತ್ರ ಕಿರಣ್ ಕುಮಾರ್ ಕಶ್ಯಪ್ ಅವರು ತಂದೆಯೇ ತಾಯಿಯನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಶವಪರೀಕ್ಷೆ ನಡೆಸಿದ ವೈದ್ಯರು, ಸುಮಿತ್ರಾ ಪ್ರಸಾದ್ ಅವರ ದೇಹದ ಮೇಲೆ ಯಾವುದೇ ರೀತಿಯ ಹಲ್ಲೆಯ ಗುರುತುಗಳು ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಅವರಿಗೆ ತೀವ್ರ ಹೃದಯಾಘಾತವಾಗಿದ್ದೇ ಸಾವಿಗೆ ಕಾರಣ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ವರದಿಯ ಪ್ರಕಾರ, ಮೊದಲು ಸುಮಿತ್ರಾ ಪ್ರಸಾದ್ ಮೃತಪಟ್ಟಿದ್ದು, ಹಲವು ಗಂಟೆಗಳ ಬಳಿಕ ಶಿವಾನಂದಂ ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

ಸುಮಿತ್ರಾ ಪ್ರಸಾದ್ ಅವರು ದೃಷ್ಟಿ ಮತ್ತು ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದರು. ಶಿವಾನಂದಂ ಪ್ರಸಾದ್ ಅವರಿಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿದ್ದವು. ಪತ್ನಿಯ ಹಠಾತ್ ಸಾವಿನಿಂದ ಮನನೊಂದ ಅವರು, ಏಕಾಂಗಿತನ ಹಾಗೂ ಆಘಾತದಿಂದ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೂಲತಃ ಬಿಹಾರದವರಾದ ಈ ದಂಪತಿ ಬೆಂಗಳೂರಿನ ಚೊಕ್ಕನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ವಾಸವಾಗಿದ್ದರು. ಪ್ರಕರಣದ ಕುರಿತು ಪೊಲೀಸರು ವೈದ್ಯಕೀಯ ವರದಿ ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ತನಿಖೆ ಮುಂದುವರಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!