ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಾರ್ಖಾನೆಗಳ ತ್ಯಾಜ್ಯ ಭೂಗರ್ಭವನ್ನು ವಿಷಗೊಳಿಸುತ್ತಿದೆ, ನದಿಯನ್ನು ವಿಷಗೊಳಿಸುತ್ತಿದೆ, ಅದರ ಮೂಲಕ ಇಲ್ಲಿನ ನೀರು, ಗಾಳಿ ಮತ್ತು ಮಣ್ಣು ವಿಷ ಮತ್ತು ಮಾಲಿನ್ಯಗೊಂಡು ಇಲ್ಲಿನ ಜನರಲ್ಲಿ ಬಂಜೆತನ ಮತ್ತು ನಪುಂಸಕತೆಯನ್ನು ಹೆಚ್ಚು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯ 49ನೇ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಖಾನೆ ವಿರೋಧಿ ಹೋರಾಟದಲ್ಲಿ ಜನಸಾಮಾನ್ಯರ ಜೊತೆಗೆ ಪ್ರಗತಿಪರರು ಸಹ ಬೆಂಬಲಿಸುತ್ತಿದ್ದಾರೆ. ಅದೇ ರೀತಿ ಕೊಪ್ಪಳ ವೈದ್ಯರ ಸಂಘದಿಂದ ಒಂದು ದಿನ ಬೆಂಬಲ ನೀಡಿ ಹೋರಾಟವನ್ನು ಗಟ್ಟಿಗೊಳಿಸುವ ಜೊತೆಗೆ ತನು-ಮನ-ಧನದ ಸಹಕಾರ ನೀಡಿ ಸದಾ ಹೋರಾಟದ ಭಾಗವಾಗಿದ್ದಾರೆ. ಒಬ್ಬ ವೈದ್ಯೆಯಾಗಿ ನಾನು ಮಧ್ಯಮ ವರ್ಗದ ಜನರ ಸಂಕಷ್ಟ ನೋಡಿದ್ದೇನೆ. ಅವರು ಹತ್ತು ವರ್ಷ ದುಡಿದು ತೆಗೆದಿರಿಸಿದ ಹಣ ಇವತ್ತಿನ ಕಾಯಿಲೆಗಳನ್ನು ತೋರಿಸಿಕೊಳ್ಳಲು ಸಾಲುತ್ತಿಲ್ಲ ಎಂಬ ಅಂಶ ಬಹಳ ಸಂಕಷ್ಟದ್ದು ಎಂದರು.
ಇನ್ನರ್ ವ್ಹೀಲ್ ಕ್ಲಬ್ ಕೊಪ್ಪಳದ ಅಧ್ಯಕ್ಷೆ ಮಧು ಶೆಟ್ಟರ್ ಮಾತನಾಡಿ, ಈಗಾಗಲೇ ತಡವಾಗಿದ್ದು, ನಾವೂ ಸಹ ಹೋರಾಟಕ್ಕೆ ತಡವಾಗಿ ಬಂದು ಭಾಗವಹಿಸಿದ್ದೇವೆ. ಕೊಪ್ಪಳವನ್ನೇ ಯಾಕೆ ಕಾರ್ಖಾನೆ ತುಂಬಿಸಿ ಹಾಳು ಮಾಡುತ್ತಿದ್ದಾರೆ, ಮಕ್ಕಳನ್ನು ನಾವು ನಮ್ಮ ಜೊತೆಗೆ ಇಟ್ಟುಕೊಂಡು ಓದಿಸಲು ಆಗದಷ್ಟು ಇಲ್ಲಿ ಆರೋಗ್ಯ ಕೆಡುತ್ತಿದೆ. ಸರ್ಕಾರ ಎಚ್ಚರಗೊಂಡು ಇಲ್ಲಿನ ಜನರಿಗೆ ಅವರ ಇಚ್ಛೆಯಂತೆ ಬದುಕಲು ಬಿಡಬೇಕು ಎಂದರು.
ಇನ್ನರ್ ವ್ಹೀಲ್ ಕ್ಲಬ್ನ ಸೌಮ್ಯ ನಾಲವಾಡ ಮಾತನಾಡಿ, ಶುಕ್ರವಾರ 50ನೇ ದಿನವಾಗಿದ್ದರಿಂದ ಹೆಚ್ಚಿನ ಜನರು ಸೇರಬೇಕು. ಇಲ್ಲಿನ ಪ್ರಮುಖ ಹೋರಾಟಗಾರರ ನಿಷ್ಕಲ್ಮಷವಾದ ಹೋರಾಟವನ್ನು ಕಂಡು ವಿವಿಧ ಸಂಘಟನೆಗಳು ಬೆಂಬಲ ಕೊಟ್ಟಿದ್ದಾರೆ. ಸಚಿವರು ಸಹ ಹೋರಾಟಕ್ಕೆ ಬೆಂಬಲ ನೀಡಿದ್ದು ಬಹಳ ಒಳ್ಳೆಯ ಬೆಳವಣಿಗೆ. ಒಳ್ಳೆಯ ಕೆಲಸ ಮಾಡುವಾಗ ವಿರೋಧಿಸುವ ಜನ ಕೆಲವರು ಇದ್ದೇ ಇರುತ್ತಾರೆ. ಇಡೀ ಕೊಪ್ಪಳ ಭಾಗ್ಯನಗರ ಮತ್ತು ಹಲವಾರು ಹಳ್ಳಿಗಳ ಜನರು ಭಯಪಡದೇ ಒಕ್ಕೊರಲಿನಿಂದ ಹೋರಾಟವನ್ನು ಬೆಂಬಲಿಸಬೇಕು, ನಿಶ್ಚಿತವಾಗಿ ಹೋರಾಟ ಗೆಲ್ಲುತ್ತದೆ ಎಂದರು.
ವೇದಿಕೆಯಲ್ಲಿ ಕಾರ್ಯದರ್ಶಿ ರೇಖಾ ಕಡ್ಲಿ, ಸುವರ್ಣ ಆರ್. ಶೆಟ್ಟರ್, ಹೇಮಾ ಬಳ್ಳಾರಿ, ಸುಧಾ ಶೆಟ್ಟರ್, ಶ್ವೇತಾ ಪಿ. ಅಕ್ಕಿ, ಸಾವಿತ್ರಿ ಮುಜುಮದಾರ, ಶಿಲ್ಪಾ ಶಶಿಮಠ, ಸೌಮ್ಯ ನಾಲವಾಡ, ಪ್ರತಿಮಾ ಪಟ್ಟಣಶೆಟ್ಟಿ, ಕವಿತಾ ಶೆಟ್ಟರ್, ಲತಾ ಉಲ್ಲತ್ತಿ, ಸುಜಾತಾ ಶೆಟ್ಟರ್, ಶೋಭಾ ಹಮ್ಮಿಗಿ, ಶರಣಮ್ಮ ಪಾಟೀಲ್, ಶಶಿಕಲಾ ಕುರುಗೋಡು ಇದ್ದರು.
ನಿವೃತ್ತ ಉಪನ್ಯಾಸಕ ಶಾಂತವೀರ ಎಮ್. ಕಂಬಾಳಿಮಠ, ಶಂಭುಲಿಂಗಪ್ಪ ಹರಗೇರಿ, ಡಿ.ಎಂ. ಬಡಿಗೇರ, ಎಸ್.ಬಿ. ರಾಜೂರು, ಸಿ.ವಿ. ಜಡಿಯವರ, ಜಿ.ಬಿ. ಪಾಟೀಲ್, ರವಿ ಕಾಂತನವರ, ಶಾಂತಯ್ಯ ಅಂಗಡಿ, ಶರಣು ಗಡ್ಡಿ, ಮಹಾದೇವಪ್ಪ ಎಸ್. ಮಾವಿನಮಡು, ಎಚ್.ಬಿ. ಆನಂದಳ್ಳಿ, ಭೋಜಪ್ಪ ಕುಂಬಾರ, ಬಸವರಾಜ ನರೇಗಲ್, ಮಂಗಳೇಶ ರಾಠೋಡ್, ರಂಗನಾಥ ಕೋಳೂರು, ಭೀಮಪ್ಪ ಯಲಬುರ್ಗಾ, ಶಂಭುಲಿಗಪ್ಪ ಹರಗೇರಿ, ಮಖ್ಬುಲ್ ರಾಯಚೂರು, ಎಸ್.ಬಿ. ರಾಯಚೂರು, ಲಿಂಗರಾಜ ನವಲಿ, ಸುರೇಶಗೌಡ ಹಿರೇಗೌಡರ, ಶಿವಪ್ಪ ಹಡಪದ ಪಾಲ್ಗೊಂಡಿದ್ದರು.
ಬಾಕ್ಸ್
ಇಂದು 50ನೇ ದಿನದ ಹೋರಾಟ
ಹೋರಾಟದ 50ನೇ ದಿನವಾದ ಡಿ.19ರ ಬೆಳಿಗ್ಗೆ 11 ಗಂಟೆಗೆ ಬಹಿರಂಗ ಸಭೆ ನಡೆಸಲಾಗುತ್ತಿದೆ. ಸಭೆಯ ಸಾನ್ನಿಧ್ಯವನ್ನು ಅಥಣಿ ನಿಡಸೋಸಿ ಸ್ವಾಮಿಗಳು ವಹಿಸಲಿದ್ದಾರೆ. ಕಪ್ಪತ್ತಗುಡ್ಡ ಸಂರಕ್ಷಣೆ ಮಾಡಿದ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಆಗಮಿಸುವರು. ವಿಶೇಷ ಅತಿಥಿಯಾಗಿ ಅರಕಲಗೂಡು ಮಾಜಿ ಶಾಸಕರು, `ಪರಿಸರಕ್ಕಾಗಿ ನಾವು’ ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ.



