ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ, ಅದರಲ್ಲೂ ಗದಗ ಜಿಲ್ಲೆಯ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಅತಿ ಹೆಚ್ಚು ಎರೆ ಭೂಮಿಯನ್ನು ಹೊಂದಿದ್ದು, ಈ ಬಾರಿ ಡಿ. 19ರ ಎಳ್ಳ ಅಮಾವಾಸ್ಯೆಯಂದು ಭೂಮಿಪೂಜೆ ನೆರವೇರಿಸುತ್ತಾರೆ. ಯಾವುದೇ ಜಾತಿ-ಮತ ಭೇದವಿಲ್ಲದೆ ಆಚರಣೆ ಮಾಡುವ ಅನ್ನದಾತರ ಹಬ್ಬ ಇದಾಗಿದೆ.
ಎಳ್ಳು ಅಮಾವಾಸ್ಯೆಗೆ ಇನ್ನು ಐದಾರು ದಿನ ಇರುವಾಗಲೇ ಚಕ್ಕಡಿ, ಎತ್ತು ಹಾಗೂ ಟ್ರ್ಯಾಕ್ಟರ್ಗಳನ್ನು ಸಿಂಗರಿಸುವ ಹುಮ್ಮಸ್ಸಿನಲ್ಲಿದ್ದರೆ, ಮಹಿಳೆಯರು ಬಗೆ ಬಗೆಯ ಅಡುಗೆಯನ್ನು ತಯಾರು ಮಾಡುವ ಸಂಭ್ರಮದಲ್ಲಿರುತ್ತಾರೆ. ಎಳ್ಳ ಅಮಾವಾಸ್ಯೆಯ ದಿನ ಅನ್ನದಾತರು ಆದ್ಯ ದೇವತೆಯಾದ ಭೂತಾಯಿಗೆ ಸೀಮಂತ ಕಾರ್ಯ ಮಾಡುವುದು ಉತ್ತರ ಕರ್ನಾಟಕದ ರೈತರ ಪದ್ಧತಿಯಾಗಿದೆ.
ಈ ಸಂದರ್ಭದಲ್ಲಿ ರೈತರು ತಮ್ಮ ತಮ್ಮ ಹೊಲದಲ್ಲಿರುವ ಬನ್ನಿ ಮಹಾಕಾಳಿಗೆ ಪೂಜೆ ಸಲ್ಲಿಸಿ ಐದು ಕಲ್ಲುಗಳನ್ನು ಇಟ್ಟು ಅವುಗಳನ್ನು ಪಂಚಪಾಂಡವರೆಂದು ಹಾಗೂ ಅದರ ಹಿಂದಿನ ಒಂದು ಕಲ್ಲನ್ನು ಇಟ್ಟು ಮಹಾ ಕಳ್ಳನೆಂದು ಹೇಳುತ್ತಾರೆ. ಎಲ್ಲವುಗಳಿಗೆ ವಿಭೂತಿ, ಕುಂಕುಮ ಹಚ್ಚಿ ಮರಕ್ಕೆ ಸುಣ್ಣದಿಂದ ಐದು ಸುತ್ತು ಗೆರೆ ಬರೆದು ಪೂಜಿಸಿ, ನೈವೇದ್ಯ ಹಿಡಿದು ಹೊಲದ ಸುತ್ತ ಚರಗವನ್ನು ಚೆಲ್ಲುತ್ತಾರೆ.
ನಂತರ ಎಲ್ಲರೂ ಸೇರಿ ಹೊಟ್ಟೆ ತುಂಬ ಭೋಜನ ಸ್ವೀಕರಿಸಿ ಬೆಳೆದ ಬೆಳೆಯನ್ನೆಲ್ಲ ಅಡ್ಡಾಡಿ, ಮರದ ಕೆಳಗೆ ವಿಶ್ರಾಂತಿ ತೆಗೆದುಕೊಂಡರೆ, ಮಕ್ಕಳು ತಮ್ಮ ಹಾಗೂ ಅವರಿವರ ಹೊಲದಲ್ಲಿ ಬೆಳೆದ ಕಡಲೆಕಾಯಿಯನ್ನು ಕಿತ್ತು ತಿಂದು ಸಂಭ್ರಮಿಸುತ್ತಾರೆ. ಈ ಆಚರಣೆ ಗ್ರಾಮೀಣ ಸೊಗಡು ಸಂಭ್ರಮವನ್ನು ಬಿಂಬಿಸುತ್ತಿದೆ ಎನ್ನುತ್ತಾರೆ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ.



