ವಿಜಯಸಾಕ್ಷಿ ಸುದ್ದಿ, ಗದಗ: ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೊಂದೇ ಪರಿಹಾರ ಎಂಬುದನ್ನು ಅರಿತು ಜ್ಯೋತಿಬಾ ಫುಲೆ ಅವರ ಸಹಕಾರದೊಂದಿಗೆ ಶಾಲೆಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರಿಗೆ ಮತ್ತು ಕೆಳವರ್ಗದ ಜನರಿಗೆ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಕ್ರಾಂತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ ಬರೆದರು ಎಂದು ಎಂ.ಜಿ.ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಚೈತ್ರಾ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ಮೈಲಾರಪ್ಪ ಮೆಣಸಗಿ ಸ್ಮರಣಾರ್ಥ ಜರುಗಿದ ಕುಮಾರವ್ಯಾಸ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸ್ಪೃಶ್ಯತೆ, ಬಾಲ್ಯವಿವಾಹ, ಸತಿ ಸಹಗಮನ, ಕೇಶಮುಂಡನದಂತಹ ಅನಿಷ್ಠ ಆಚರಣೆಗಳ ವಿರುದ್ಧ ಹೋರಾಟವನ್ನು ಮಾಡಿದರು. ಮಹಿಳಾ ಸಬಲೀಕರಣಕ್ಕೆ ಸಾವಿತ್ರಿಬಾಯಿ ಫುಲೆ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.
ಮೈಲಾರಪ್ಪ ಮೆಣಸಗಿಅವರ ಸಂಸ್ಮರಣೆ ಮಾಡಿದ ಕಾರ್ಯದರ್ಶಿ ಡಾ. ದತ್ತಪ್ರಸನ್ನ ಪಾಟೀಲ, ಶ್ರಮ ಸಂಸ್ಕೃತಿಯ ಮೂಲಕ ಪ್ರಕಾಶನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ಮಾಡಿ ಕಾನೂನು ಹಾಗೂ ಶೈಕ್ಷಣಿಕ ಪುಸ್ತಕಗಳನ್ನು ಪ್ರಕಟಿಸಿ ನಾಡಿನ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿ ಕೀರ್ತಿ ವಿದ್ಯಾನಿಧಿ ಪ್ರಕಾಶನದ ಮೈಲಾರಪ್ಪ ಮೆಣಸಗಿ ಅವರಿಗೆ ಸಲ್ಲುತ್ತದೆ ಎಂದರು.
ದತ್ತಿದಾನಿ ಜಯದೇವ ಮೆಣಸಗಿ ಮಾತನಾಡಿ, ಗದಗ ಜಿಲ್ಲಾ ಕಸಾಪ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಿರುವ ದತ್ತಿ ನಿಧಿಯನ್ನು ಹೆಚ್ಚಿಸಿ ತಮ್ಮ ತಂದೆಯವರ ಹೆಸರಿನಲ್ಲಿ ಮುಂದಿನ ವರ್ಷದಿಂದ ನಾಡಿನ ಪ್ರಕಾಶಕರೊಬ್ಬರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡುವ ದಿಸೆಯಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕುಮಾರವ್ಯಾಸ ಜಯಂತಿ ಅಂಗವಾಗಿ ಹೆಸರಾಂತ ಗಮಕಿಗಳಾದ ವಾಸುದೇವಾಚಾರ್ಯ ಹೂಲಿ ಹಾಗೂ ಐಶ್ವರ್ಯ ಹೂಲಿ ಕುಮಾರವ್ಯಾಸ ಭಾರತದ ಪ್ರಸಂಗಗಳ ವಾಚನ ಮತ್ತು ವ್ಯಾಖ್ಯಾನ ನಡೆಸಿಕೊಟ್ಟರು. ಮಂಜುಳಾ ವೆಂಕಟೇಶಯ್ಯ ಸಾವಿತ್ರಿಬಾಯಿ ಫುಲೆ ಕುರಿತು ಕವನ ವಾಚಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ವಿ.ಎಸ್. ದಲಾಲಿ ಅವರನ್ನು ಸನ್ಮಾನಿಸಲಾಯಿತು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಅಮರೇಶರಾಂಪೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಸಿ.ಕೆ.ಎಚ್. ಶಾಸ್ತ್ರಿ, ಅರ್ಜುನ ಗೊಳಸಂಗಿ, ದೇವೇಂದ್ರ ನಾಯಕ, ಬಿ.ಬಿ. ಹೊಳಗುಂದಿ, ಜೆ.ಎ. ಪಾಟೀಲ, ಎ.ಎಂ. ಅಂಗಡಿ, ರತ್ನಕ್ಕ ಪಾಟೀಲ, ಸಿ.ಎಂ. ಮಾರನಬಸರಿ, ಜಿ.ಎ. ಪಾಟೀಲ, ಕೆ.ಎಸ್. ಪಲ್ಲೇದ, ಬಸವರಾಜ ನೆಲಜೇರಿ, ಉಮಾ ಕಣವಿ, ನೀಲಮ್ಮ ಅಂಗಡಿ, ರಾಜಶೇಖರ ಕರಡಿ, ಎಂ.ಎಫ್. ಡೋಣಿ, ಎಸ್.ಎಂ. ಗುಳಗುಳಿ, ಎಸ್.ಡಿ. ಗಾಂಜಿ, ಅಶೋಕ ಸತ್ಯರಡ್ಡಿ, ರಾಹುಲ ಗಿಡ್ನಂದಿ, ಎಂ.ಎಚ್. ಕಾಮನಹಳ್ಳಿ, ಸಂತೋಷಕುಮಾರ, ಎಸ್.ಎಂ. ಗುಳಗುಳಿ, ಡಿ.ಜಿ. ಕುಲಕರ್ಣಿ, ಬಸವರಾಜ ಗಣಪ್ಪನವರ, ರವೀಂದ್ರ ಜೋಶಿ, ಶ್ರೀಕಾಂತ ಹೂಲಿ, ಶರಣಪ್ಪ ಹೊಸಂಗಡಿ, ರಾಜಶೇಖರ ದಾನರಡ್ಡಿ, ಎಂ.ಎನ್. ಕಾಗದಗಾರ, ಬಿ.ಬಿ. ಪಾಟೀಲ, ರವಿ ದೇವರಡ್ಡಿ, ಗೋವಿಂದಜಿ, ಸುರೇಶ, ಜಾನ್ ಥಾಮಸ್, ಗಿರೀಶ ಪಂತರ, ಎ.ಸಿ. ಹಿರೇಮಠ, ಅಪ್ಪಣ್ಣ ಮುರಗೋಡ, ಸಿದ್ಧರಾಮ ಪಟ್ಟೇದ, ವಿ.ಕೆ. ದ್ಯಾಮನಗೌಡರ, ಆನಂದ ಹಡಪದ, ಜಗನ್ನಾಥ, ಕೆ.ಎಸ್. ಬಾಳಿಕಾಯಿ, ರತ್ನಾ ಪುರಂತರ, ಪದ್ಮಾ ಮೆಣಸಗಿ, ಹೇಮಾವತಿ ಹೂಲಿ, ರಾಧಿಕಾ ಜೋಶಿ, ಸುಧಾ ಬಳ್ಳಿ, ಅನಸೂಯಾ ಮಿಟ್ಟಿ, ನಾಗಪ್ಪ ಸುರಳಿಕೇರಿ, ಸುಧೀರ ಘೋರ್ಪಡೆ, ಯಶೋಧಾ ಗಿಡ್ನಂದಿ, ಬಸವರಾಜ ನೆಲಜೇರಿ, ಸುಮನ ಪಾಟೀಲ, ರತ್ನಾ ಘಾರ್ಗಿ, ಮಹಾಂತೇಶ ಬಾತಾಖಾನಿ, ರವಿ ಪೂಜಾರ, ಪಿ.ಆರ್. ಇನಾಮದಾರ, ಸತೀಶ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶ್ರೇಣೀಕೃತ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯರಿಗೆ ಮತ್ತು ನಿಮ್ನ ವರ್ಗದವರಿಗೆ ಶಿಕ್ಷಣವನ್ನು ನಿರಾಕರಿಸಲಾಗಿತ್ತು. ಶೋಷಣೆಯಿಂದ ಜನ ನಲುಗುತ್ತಿದ್ದ ಸಂದರ್ಭದಲ್ಲಿ ಶಿಕ್ಷಣವನ್ನು ಮಂತ್ರದಂಡವಾಗಿಸಿಕೊಂಡು ಸಮಾನ ಸಮಾಜ ನಿರ್ಮಾಣಕ್ಕೆ ಫುಲೆ ದಂಪತಿಗಳು ಪ್ರಯತ್ನಿಸಿದರು. ಶಾಲೆ ಮತ್ತು ಆಶ್ರಮಗಳನ್ನು ಸ್ಥಾಪಿಸಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡಿದರು ಎಂದು ತಿಳಿಸಿದರು.



