ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಪವಿತ್ರ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಸೂರ್ಯದೇವನು ಮಕರ ಚಕ್ರವನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಉತ್ತರಾಯಣದ ಈ ಪರ್ವ ಬದಲಾವಣೆಗೆ ನಾಂದಿಯಾಗುತ್ತದೆ. ಅಂತೆಯೇ ಮಾನವನಲ್ಲಿಯೂ ಸಹ ಬದಲಾವಣೆ ಸಹಜವಾಗಿರುತ್ತದೆ. ಈ ಕಾಲದಲ್ಲಿ ಚಳಿ ತೊರೆದು ಸೂರ್ಯನ ಕಿರಣ ವ್ಯಾಪ್ತಿ ಮತ್ತು ಅದರ ಶಾಖ ಭೂಮಿಯ ಮೇಲೆ ಹೆಚ್ಚಾಗುತ್ತಾ ಹೋದಂತೆ ಅನೇಕ ಬದಲಾವಣೆ ಪ್ರಕೃತಿಯಲ್ಲಿಯೂ ಸಹ ನಾವು ನೋಡುತ್ತೇವೆ. ಬದಲಾವಣೆಗೆ ತಕ್ಕಂತೆ ನಮ್ಮ ಆಚಾರ-ವಿಚಾರ, ನಡತೆಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ವೀಣಾ ತಿರ್ಲಾಪುರ ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ವಿವಿಧೋದ್ದೇಶ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೇಮಾ ಮೇಟಿ ಮಾತನಾಡಿ, ಈ ಋತುಮಾನ ಮನುಷ್ಯನನ್ನು ದೈಹಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿಯೂ ಕೂಡ ಬದಲಾವಣೆ ಮಾಡುತ್ತದೆ. ಇದು ಸುಗ್ಗಿಯ ಕಾಲ ಮತ್ತು ಹರ್ಷದ ಪರ್ವಕಾಲ ಎಂದು ನುಡಿದರು.
ಇದೇ ಸಂದರ್ಭದಲ್ಲಿ ದಿ. ಚಂದ್ರಶೇಖರಪ್ಪ ಬಸವಂತಪ್ಪ ಭೂಮರೆಡ್ಡಿ, ದಿ. ಸಂಜಯ್ ರೆಡ್ಡಿ ವೀರಪ್ಪ ಮಾಸರೆಡ್ಡಿ ಮತ್ತು ದಿ. ಕಿರಣ ಹನುಮಪ್ಪ ಮಧುರೆಡ್ಡಿಯವರಿಗೆ ಮೌನಾಚರಣೆ ಸಲ್ಲಿಸಲಾಯಿತು.
ವೇದಿಕೆಯ ಮೇಲೆ ಉಪಾಧ್ಯಕ್ಷರಾದ ಕಸ್ತೂರಿ ಹಿರೇಗೌಡರ್, ಖಜಾಂಚಿ ಸರೋಜಾ ಪೈಲ್ ಉಪಸ್ಥಿತರಿದ್ದರು. ನೀಲ ಮುದರಡ್ಡಿ, ಸುಮಂಗಲ ಪಾಟೀಲ್, ಅಕ್ಕಮ್ಮ ರೆಡ್ಡಿ, ಶಾಂತ ದೊಡ್ಡಮನಿ ಮುಂತಾದವರು ಪಾಲ್ಗೊಂಡಿದ್ದರು. ಕವಿತಾ ಕೊಣ್ಣೂರ್ ಪ್ರಾರ್ಥಿಸಿದರು. ಮಧು ಪಾಟೀಲ್ ನಿರೂಪಿಸಿದರು. ಭಾಗ್ಯ ಶಿರೋಳ ವಂದಿಸಿದರು.



