ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಶೋಷಿತರ ಹಾಗೂ ದಮನಿತರ ಧ್ವನಿಯಾಗಿ ಪತ್ರಿಕೋದ್ಯಮ ಬೆಳೆಯುತ್ತ ಬಂದಿದೆ. ಆದರೆ ತಾಲೂಕಿನಲ್ಲಿ ಕೆಲ ಪತ್ರಕರ್ತರು ಕೇವಲ ಒಂದು ವರ್ಗದತ್ತ ಹೆಚ್ಚು ಕೇಂದ್ರೀಕೃತರಾಗಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ. ಮನೋಹರ್ ಅಭಿಪ್ರಾಯಪಟ್ಟರು.
ಹರಪನಹಳ್ಳಿ ನಗರದ ಹೊರವಲಯದಲ್ಲಿರುವ ಸಮತಾ ರೆಸಾರ್ಟ್ನಲ್ಲಿ ನೂತನವಾಗಿ ಆಯ್ಕೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿಯ ಪದಾಧಿಕಾರಿಗಳಿಗೆ ತಾಲೂಕು ಸರ್ಕಾರಿ ನೌಕರರ ಸಂಘ ಹಾಗೂ ಸಾವಿತ್ರಿಬಾಯಿ ಫುಲೆ ಜಿಲ್ಲಾ ಸಮಿತಿ ವತಿಯಿಂದ ಏರ್ಪಡಿಸಿದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಚಳವಳಿ ಹಾಗೂ ಆಂದೋಲನಗಳು ಯಶಸ್ವಿಯಾಗಬೇಕಾದರೆ ಸುದ್ದಿ ಮಾಧ್ಯಮಗಳ ಪಾತ್ರ ಅಮೋಘವಾಗಿದೆ. ಇಂದಿನ ಪತ್ರಿಕೋದ್ಯಮದಲ್ಲೇ ಆಂತರಿಕ ಸಮಸ್ಯೆಗಳು ರೆಕ್ಕೆಯಿಲ್ಲದ ಹಕ್ಕಿಯಂತಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎತ್ತಿ ತೋರಿಸುವುದು ಹಾಗೂ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂಬುದನ್ನು ಸಮಾಜ ಗಮನದಲ್ಲಿಟ್ಟುಕೊಳ್ಳಬೇಕು. ಸಮಾಜಮುಖಿ ಕೆಲಸಗಳು ನಡೆಯಬೇಕು. ಅಂತಹ ಕಾರ್ಯಗಳು ನಿಮ್ಮಿಂದ ನಿರಂತರವಾಗಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ ಸಂಗಯ್ಯ, ಸಿ. ನಾಗರಾಜ, ಕಮ್ಮತ್ತರ ಅಂಜಿನಪ್ಪ, ವೀರಪ್ಪ, ಪಿ. ಸುಬ್ಬಣ್ಣ, ಇಸ್ಮಾಯಿಲ್ ಗಿರಿರಾಜ್, ಜಮಾಲುದ್ದೀನ್, ಶೋಭಾಕುಮಾರಿ, ಹುಸೇನ್ ಬಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಹಾಗೂ ಕಾಂಗ್ರೆಸ್ ಮುಖಂಡ ಕೋಡಿಹಳ್ಳಿ ಭೀಮಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ. ಮನೋಹರ್, ಸಾವಿತ್ರಿಬಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷೆ ಎಚ್.ಎಂ. ಲತಾ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಗುರುಮೂರ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿ ತಾಲೂಕಾಧ್ಯಕ್ಷ ಎ. ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ವೈ. ದುರುಗೇಶ್, ಗೌರವಾದ್ಯಕ್ಷ ಕೆ. ಉಚ್ಚೆಂಗೆಪ್ಪ, ಉಪಾಧ್ಯಕ್ಷ ಪಿ. ವೆಂಕಟೇಶ್, ಹಿರಿಯ ಪತ್ರಕರ್ತ ಡಿ. ವಿಶ್ವನಾಥ, ನಾಗಭೂಷಣ, ವೆಂಕಟಪತಿ ರಾಜು, ರಾಮಚಂದ್ರ ನಾಗತಿಕಟ್ಟೆ, ಭೋವಿ ಮಂಜುನಾಥ, ಎ. ಬಸವರಾಜ, ಕೆ. ಬಸವರಾಜ, ಶಬ್ಬೀರ್, ಮೈಲಾರಿ, ಶಶಿ, ಪಿ. ಬಸವರಾಜ ಮುಂತಾದವರು ಹಾಜರಿದ್ದರು.
ಪ್ರಗತಿಪರ ಚಿಂತಕ ಹಾಗೂ ಕಾಂಗ್ರೆಸ್ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಹಾಗೂ ಪತನಗೊಳಿಸುವ ಶಕ್ತಿ ಮಾಧ್ಯಮಕ್ಕಿದೆ. ಸತ್ಯದಿಂದ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡದೇ, ವಾಸ್ತವಕ್ಕೆ ಸಮೀಪವಿರುವ ಸುದ್ದಿಗಳನ್ನು ಮಾತ್ರ ಬಿತ್ತರಿಸಬೇಕು. ಪತ್ರಕರ್ತರು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು ಎಂದು ಹೇಳಿದರು.



