ವಿಜಯಸಾಕ್ಷಿ ಸುದ್ದಿ, ಗದಗ: ಅನುಭವಗಳಿಗೆ ಅಕ್ಷರ ತೊಡಿಸಿ ಕಾವ್ಯವಾಗಿಸುವ ಮೂಲಕ ಸಹೃದಯರಲ್ಲಿ ವಿಶಿಷ್ಠ ಅನುಭೂತಿಯನ್ನು ಉಂಟು ಮಾಡುವ ಕವಿ ಸದಾಕಾಲ ಸ್ಮರಣೆಯಲ್ಲಿ ಉಳಿಯುತ್ತಾರೆ. ಪ್ರಚಲಿತ ಸಂಕಟಗಳನ್ನು ಕಾವ್ಯ ಒಳಗೊಂಡು ಒಳ ಮತ್ತು ಹೊರ ಬದಲಾವಣೆ ಕಾರಣವಾಗಬೇಕು. ಪ್ರವೃತ್ತಿಗಳು ಉತ್ತಮವಾಗಿದ್ದರೂ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಅಧ್ಯಾಪಕರು ಓದುವ ಪ್ರವೃತ್ತಿಯನ್ನು ಅಧಿಕಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಮನಿ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಮಮತಾ ಚ.ದೊಡ್ಡಮನಿ ಅವರ ‘ಮಾತಿಗಿಳಿದ ಹಣತೆ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಪುಸ್ತಕ ಪರಿಚಯವನ್ನು ಮಾಡಿದ ಸಾಹಿತಿ ಶಿಲ್ಪಾ ಮ್ಯಾಗೇರಿ, ಹಣತೆ ಹೆಣ್ಣಿನ ಪ್ರತೀಕವಾಗಿ ಈ ಸಂಕಲನದಲ್ಲಿ ಮೂಡಿಬಂದಿದೆ. ನಿತ್ಯ ಜೀವನದ ಅನೇಕ ಸಂಗತಿಗಳು ಇಲ್ಲಿ ಅಕ್ಷರ ತೋರಣ ಕಟ್ಟಿವೆ. ಜೀವಪರ ವಿಚಾರಗಳನ್ನು ಕವಿತೆಗಳ ಮೂಲಕ ಹಂಚುವ ಕಾರ್ಯವನ್ನು ಕವಿ ಇಲ್ಲಿ ಮಾಡಿದ್ದಾರೆ. ಪುರುಷರಿಗಿಂತ ಮಹಿಳೆಯರ ವಿಚಾರಗಳು, ತಲ್ಲಣಗಳು ಬೇರೆಯಾಗಿರುವದರಿಂದ ಅವುಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಸಂಕಲನದಲ್ಲಿ ಮಾಡಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ ಮಾತನಾಡಿ, ಶಿಕ್ಷಕರು ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಲ್ಲೂ ಆಸಕ್ತಿ ಮೂಡಿಸಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಡಿ.ಎಸ್. ತಳವಾರ ಮಾತನಾಡಿ, ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಶಿಕ್ಷಕರನ್ನು ಇಲಾಖೆ ಗುರುತಿಸಿ ಗೌರವಿಸಬೇಕು. ಮಮತಾ ದೊಡ್ಡಮನಿ ಅವರು ವೃತ್ತಿ ದೈಹಿಕ ಶಿಕ್ಷಣ ಶಿಕ್ಷಕಿಯರಾಗಿದ್ದರೂ ಅವರ ಸಾಹಿತ್ಯ ಪ್ರೀತಿ ಮಾದರಿಯಾದುದು ಎಂದು ತಿಳಿಸಿದರು.
ಕವಯಿತ್ರಿ ಮಮತಾ ದೊಡ್ಡಮನಿ ತಮ್ಮ ಸಾಹಿತ್ಯ ಪಯಣವನ್ನು ವಿವರಿಸಿ, ಸಹಾಯ ಸಹಕಾರ ನೀಡಿದ ಸರ್ವರನ್ನು ಸ್ಮರಿಸಿದರು. ಡಿ.ಕೆ. ಕಲ್ಲೊಳ್ಳಿ, ಎಂ.ಐ. ಮುಗಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕವಿ ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯಗಳು ಕೃತಿಯ ಮುಖಪುಟ ಅನಾವರಣಗೊಳಿಸಲಾಯಿತು.
ಭಾಗ್ಯಶ್ರೀ ಹುರಕಡ್ಡಿ, ಕೊಟ್ರೇಶ ಜವಳಿ, ರಮಾ ಚಿಗಟೇರಿ, ಆನಂದ ಹಕ್ಕೆನ್ನವರ, ಸುಷ್ಮಾ ಹುಚ್ಚಣ್ಣವರ, ಕವನ ವಾಚಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ನೀಲಮ್ಮ ಅಂಗಡಿ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ವಿ.ಕೆ. ಗುರುಮಠ, ವಿ.ಎಸ್. ದಲಾಲಿ, ವಿದ್ಯಾಧರ ದೊಡ್ಡಮನಿ, ಎಸ್.ಎಂ. ಕಾತರಕಿ, ರತ್ನಕ್ಕ ಪಾಟೀಲ, ಪುಟ್ಟರಾಜ ಬೂದನೂರ, ರಾಜಶೇಖರ ಕರಡಿ, ಎಚ್.ಡಿ. ಕುರಿ, ಎಂ.ಎ. ಭೋಜೆದಾರ, ವಾಯ್.ಯು. ಅಣ್ಣಿಗೇರಿ, ಎಸ್.ಆರ್. ಮಟ್ಟಿ, ಎಲ್.ಎಲ್. ಚವ್ಹಾಣ, ಎಸ್.ಎಸ್. ಗಾಣಿಗೇರ, ಬಿ.ಎಸ್. ಚವಡಿ, ಎನ್.ಆರ್. ಹೂಗಾರ, ವಾಯ್.ಎಫ್. ನಾಯ್ಕರ, ಯು.ಎಸ್. ಕಣವಿ, ಶೈಲಶ್ರೀ ಕಪ್ಪರದ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಶ್ಮಿ ಅಂಗಡಿ, ರಾಜೇಶ್ವರ ಬಡ್ನಿ, ಅನಸೂಯಾ ಮಿಟ್ಟಿ, ಮಂಜುಳಾ ವೆಂಕಟೇಶಯ್ಯ, ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ, ಶಶಿಕಾಂತ ಕೊರ್ಲಹಳ್ಳಿ, ಅಂದಾನೆಪ್ಪ ವಿಭೂತಿ, ಕೊಟ್ರೇಶ ಉಪ್ಪಿನ, ಎಂ.ಎಚ್. ದೊಡ್ಡಮನಿ, ಸುಮಾ ಹುಚ್ಚಮ್ಮವರ, ಮಂಜುನಾಥ ಹುಚ್ಚಮ್ಮನವರ, ಮಹಾಂತೇಶ ಹುಚ್ಚಮ್ಮನವರ, ಪುಟ್ಟಪ್ಪ ಹುಚ್ಚಮ್ಮನವರ, ಶಂಕರಮ್ಮ ಹುಚ್ಚಮ್ಮನವರ, ರಾಜಾಭಕ್ಷಿ ನದಾಫ್, ಕೋಟೆಪ್ಪ ಕೂರಗುಂದ, ಸೋಮಶೇಖರ ಕೆಂಗುಡಪ್ಪನವರ, ರಂಗಪ್ಪ ಬೂದನೂರ, ವಿನಾಯಕ ಉಪ್ಪಿನ, ಕಾರ್ತಿಕ ಉಪ್ಪಿನ, ಶಿವಕುಮಾರ ವಾಲಿ, ಅಮರೇಶ ರಾಂಪೂರ, ರಾಹುಲ ಗಿಡ್ನಂದಿ, ಸತೀಶ ಚನ್ನಪ್ಪಗೌಡ್ರ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಇಲ್ಲಿಯ ಕವಿತೆಗಳು ನೆಲಮೂಲ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ನಮ್ಮ ಬೆಳವಣಿಗೆಗೆ ಕಾರಣವಾಗಿರುವ ವ್ಯಕ್ತಿ ಮತ್ತು ವಸ್ತುಗಳ ಕುರಿತು ಕಾವ್ಯ ರಚಿಸಿದ್ದಾರೆ. ಇನ್ನಷ್ಟು ಆಳವಾದ ಅಧ್ಯಯನದ ಮೂಲಕ ಉತ್ತಮ ಕೃತಿಗಳು ರಚನೆಯಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.



