ವಿಜಯಸಾಕ್ಷಿ ಸುದ್ದಿ, ಗದಗ: ನಾನು, ನನ್ನ ಹೆಂಡತಿ, ನಮ್ಮ ಮಕ್ಕಳು ಈ ಚೌಕಟ್ಟನ್ನೇ ಅವಿಭಕ್ತ ಕುಟುಂಬ ಎನ್ನುವ ಭ್ರಮೆಯಲ್ಲಿರುವರೇ ಹೆಚ್ಚಿರುವ ಇಂದಿನ ದಿನಮಾನಗಳಲ್ಲಿ, ಗೋಡೆ ಕಟ್ಟಿಕೊಂಡು ಬೇರೆಯಾಗಿ ಬದುಕುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ನಿಜವಾದ ಅವಿಭಕ್ತ ಕುಟುಂಬಗಳು ಒಟ್ಟಾಗಿ ಬಾಳಬೇಕಾದ ಅವಶ್ಯಕತೆ ಇದೆ ಎಂದು ಹೊಸಳ್ಳಿಯ ಜ. ಬೂದೀಶ್ವರ ಸಂಸ್ಥಾನಮಠದ ಪೂಜ್ಯ ಅಭಿನವ ಜ. ಬೂದೀಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಗದುಗಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಆವರಣದ ವಿವೇಕಾನಂದ ಸಾಂಸ್ಕೃತಿಕ ಸಭಾ ಭವನದಲ್ಲಿ ರಾಮಪ್ಪ ರಂಗಪ್ಪ ಕಾಶಪ್ಪನವರ ಅಭಿಮಾನಿ ಬಳಗ ಗದಗ ಇವರ ಸಹಕಾರದೊಂದಿಗೆ ಗದುಗಿನ ಶ್ರೀ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಗದಗ ಇವರ ಸಹಯೋಗದಲ್ಲಿ ರಾಮಪ್ಪ ರಂಗಪ್ಪ ಕಾಶಪ್ಪನವರ ಸೇವಾ ನಿವೃತ್ತಿ ನಿಮಿತ್ತ `ಅವಿಭಕ್ತ ಕುಟುಂಬದ ಸಾರಥಿ’ ಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅವಿಭಕ್ತ ಕುಟುಂಬದಲ್ಲಿರುವ ಪ್ರೀತಿ, ಅಂತಃಕರಣ, ವಿಶಾಲ ಮನೋಭಾವ, ಒಗ್ಗಟ್ಟು ಇವುಗಳನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಜವಾಬ್ದಾರಿ ಪಾಲಕರ ಮೇಲಿದೆ. ಅವಿಭಕ್ತ ಕುಟುಂಬವನ್ನು ಈಗಲೂ ಮುನ್ನಡೆಸುತ್ತಿರುವ ಪ್ರೀತಿ-ಬಾಂಧವ್ಯಗಳನ್ನು ಗಟ್ಟಿಯಾಗಿ ಜೋಪಾನವಾಗಿರಿಸಿಕೊಂಡಿರುವ ರಾಮಪ್ಪ ಕಾಶಪ್ಪನವರ ಕುಟುಂಬ ವರ್ಗವನ್ನು ಅಭಿನಂದಿಸಿ ಇದೊಂದು ಮಾದರಿ ಎಂದರು.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ ಮಾಡಿದರು.
ಅಭಿನಂದನಾ ನುಡಿಗಳನ್ನಾಡಿದ ಗದಗ ಸಾಯಿ ಮಂದಿರದ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್.ಬಿ. ಶೆಟ್ಟರ, ಕಾಶಪ್ಪನವರ ಸಾಮಾಜಿಕ ಕಾರ್ಯಗಳನ್ನು ಹಾಗೂ ಅವಿಭಕ್ತ ಕುಟುಂಬವನ್ನು ಮುನ್ನಡೆಸಿಕೊಂಡು ಬಂದಿರುವುದನ್ನು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ರಾಮಣ್ಣ ಕಾಶಪ್ಪನವರ 40 ವರ್ಷದ ವೃತ್ತಿ ಬದುಕನ್ನು ಮೆಲುಕು ಹಾಕಿದರು. ವೇದಿಕೆಯ ಮೇಲೆ ಆರ್.ಆರ್. ಕಾಶಪ್ಪನವರ ದಂಪತಿ, ಶಕುಂತಲಾ ದಂಡಿನ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಗಣ್ಯರಾದ ವ್ಹಿ.ವೈ. ಮಕ್ಕಣ್ಣವರ, ಶಾಂತಣ್ಣ ಕಡಿವಾಲ, ಬಿ.ಎನ್. ಯರನಾಳ, ಶಂಕರ ಹಾನಗಲ್ಲ, ಎಂ.ಎನ್. ಕಾಮನಹಳ್ಳಿ, ಎ.ಕೆ. ತಮ್ಮಣ್ಣವರ, ಮಹೇಶ ತಲೇಗೌಡ್ರ, ಡಾ. ಎಸ್.ಎಫ್. ಜಕಬಾಳ, ಸಿದ್ಧಣ್ಣ ಪಟ್ಟಣಶೆಟ್ಟಿ, ಎ.ಟಿ. ನರೇಗಲ್ಲ, ಎಸ್.ಎಸ್. ಪಾಟೀಲ, ವ್ಹಿ.ಕೆ. ಗುರುಮಠ, ಎಸ್.ಕೆ. ವಂಡಕರ ಆಗಮಿಸಿದ್ದರು.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೋಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು.
ಗ್ರಂಥಕಾರ, ಪತ್ರಕರ್ತ ಅಂದಾನೆಪ್ಪ ವಿಭೂತಿ ಅವರು ರಾಮಪ್ಪ ಕಾಶಪ್ಪನವರು ನಡೆದುಬಂದ ಬದುಕಿನ ದಾರಿ ಹಾಗೂ ಗ್ರಂಥದ ಬಗೆಗೆ ವಿವರಿಸಿದರು. ಆಶಯ ನುಡಿಗಳನ್ನಾಡಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, 18ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದ ರಾಮಪ್ಪನವರ ಪರಿಶ್ರಮದ ಬದುಕನ್ನು ಬಣ್ಣಿಸಿದರು.



