ಹಾಸನ: ರಾಜ್ಯ ಮತ್ತು ರಾಷ್ಟ್ರ ರಾಜಕೀಯದ ಭವಿಷ್ಯ ಹಾಸನ ಜಿಲ್ಲೆಯ ಸುತ್ತ ತಿರುಗುವ ಕಾಲ ಸಮೀಪಿಸುತ್ತಿದೆ ಎಂದು ಗಜೇಂದ್ರಗಡದ ತಳ್ಳಿಹಾಳ ಸಂಸ್ಥಾನ, ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹಾಸನಾಂಬ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಮಾನಗಳಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶದ ರಾಜಕೀಯದಲ್ಲಿಯೂ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಪ್ರಧಾನಿಯಾಗಲಿ ಅಥವಾ ಮುಖ್ಯಮಂತ್ರಿಯಾಗಲಿ, ಹಾಸನದೊಳಗಿಂದಲೇ ಹೊರಬರುವ ಯೋಗಗಳಿವೆ ಎಂದು ಹೇಳಿದರು.
ರಾಜಕೀಯದೊಂದಿಗೆ ಮಠದ ಸಂಬಂಧದ ಕುರಿತು ಮಾತನಾಡಿದ ಸ್ವಾಮೀಜಿ, ನಾನು ಯಾವುದೇ ರಾಜಕಾರಣಿಯಿಂದ ಹಣ ಪಡೆದಿಲ್ಲ, ಯಾರನ್ನೂ ಕರೆದು ಸನ್ಮಾನ ಮಾಡಿಲ್ಲ. ಮಠದ ಸಾನಿಧ್ಯ ಎಂದರೆ ರಾಜಕಾರಣಿಗಳಿಗೆ ಆಶೀರ್ವಾದ ನೀಡಿ ಸಮಾಜವನ್ನು ಶುದ್ಧ ಬದುಕಿನತ್ತ ನಡೆಸುವುದು ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಮುಂದಿನ ಇತಿಹಾಸದಲ್ಲಿ ಒಬ್ಬ ವ್ಯಕ್ತಿಯ ಮನೆತನಕ್ಕೆ ಅಂಟಿಕೊಂಡಿರುವ ಕಪ್ಪುಚುಕ್ಕಿ ಬಹಿರಂಗವಾಗಲಿದೆ. ಹಳ್ಳಿ–ಹಳ್ಳ ತುಂಬಿ ಹರಿಯುವ ಕಾಲದಲ್ಲಿ, ಉಳ್ಳವನು ಶಿವಪೂಜೆ ಮಾಡುವಾಗ ಸಂಸಾರ ನಿಸ್ಸಂಗ ಪರಿತ್ಯಾಗಿಯಾಗಿ ಮತ್ತೊಮ್ಮೆ ಹಾಸನದಿಂದಲೇ ರಾಜ್ಯ ಅಥವಾ ದೇಶದ ನಾಯಕತ್ವ ಹೊರಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಬಗ್ಗೆ ಹಾಗೂ 2012ರಲ್ಲಿ ನರೇಂದ್ರ ಮೋದಿ ಮೂರು ಬಾರಿ ಪ್ರಧಾನಿಯಾಗುವ ಬಗ್ಗೆ ತಾವು ನುಡಿದ ಭವಿಷ್ಯಗಳು ನಿಜವಾದುದನ್ನು ಅವರು ಸ್ಮರಿಸಿದರು.
ಹಾಸನದ ಭವಿಷ್ಯ ಕುರಿತು ಮಾತನಾಡಿದ ಅವರು, ಕಿಡಿಗಣ್ಣಯ್ಯ ಮಹಾಸ್ವಾಮಿಗಳ ಪುಣ್ಯದ ಫಲವಾಗಿ ಹಾಸನದಲ್ಲಿ ಮತ್ತೆ ಶಕ್ತಿಶಾಲಿ ನಾಯಕತ್ವ ಬೆಳೆಯಲಿದೆ. ಕೆಂಪು ಭಾವುಟ ಹಾರಿಸುವಂತಹ ವ್ಯಕ್ತಿಗಳು ಮರಳಿ ಬಂದು ಹಾಸನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು.
ಪ್ರಸ್ತುತ ಕಾಂಗ್ರೆಸ್ ಸರ್ಕಾರ ಸುಮಾರು ಎರಡು ವರ್ಷ ಮುಂದುವರಿಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಯೋಜನೆಗಳ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಮುಂದೆ ಸ್ವಲ್ಪ ಅಲುಗಾಟದ ಕಾಲ ಬರುವ ಸೂಚನೆಗಳಿದ್ದು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಹತ್ತುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಇದೇ ವೇಳೆ, ದೇಶದ ರಾಜಕೀಯ ಭವಿಷ್ಯ ಕುರಿತು ಮಾತನಾಡಿದ ಸ್ವಾಮೀಜಿ, ಮುಂದಿನ 25–28 ವರ್ಷಗಳವರೆಗೆ ಈಗಿರುವ ಶಕ್ತಿಗಳೇ ದೇಶವನ್ನು ಮುನ್ನಡೆಸಲಿದ್ದು, 2029ರ ಚುನಾವಣೆಯಲ್ಲಿ 450ರಿಂದ 472 ಸ್ಥಾನಗಳೊಂದಿಗೆ ಹೊಸ ಇತಿಹಾಸ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದರು.



