ಬೆಂಗಳೂರು: ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯೋರ್ವ ತನ್ನ ಪತ್ನಿಯನ್ನು ಪಿಸ್ತೂಲ್ನಿಂದ ಗುಂಡಿಟ್ಟು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪತಿ ಬಾಲಮುರುಗನ್ಗೆ ಪಿಸ್ತೂಲ್ ಖರೀದಿಗೆ ನೆರವಾಗಿದ್ದ ಉತ್ತರ ಪ್ರದೇಶ ಮೂಲದ ಅಭಿಮನ್ಯು ಸಿಂಗ್ನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿಸೆಂಬರ್ 23ರಂದು ಸಂಜೆ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ಪತಿ ಬಾಲಮುರುಗನ್ ತನ್ನ ಪತ್ನಿ ಭುವನೇಶ್ವರಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದ. ಪ್ರಕರಣದ ತನಿಖೆ ವೇಳೆ ಹತ್ಯೆಯ ಹಿಂದೆ ಪೂರ್ವಯೋಜನೆ ಹಾಗೂ ಸಹಚರರು ಇದ್ದುದು ಬೆಳಕಿಗೆ ಬಂದಿದೆ.
ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಮನ್ಯು ಸಿಂಗ್ಗೆ ಬಾಲಮುರುಗನ್ ಪರಿಚಯವಾಗಿದ್ದು, ಮೃತ ಭುವನೇಶ್ವರಿ ಕೆಲಸ ಮಾಡುತ್ತಿದ್ದ ಬ್ಯಾಂಕ್ ಸಮೀಪದ ಜಿಮ್ಗೆ ಅಭಿಮನ್ಯು ಸಿಂಗ್ ಬರುತ್ತಿದ್ದ. ಈ ಸಂದರ್ಭ ಭುವನೇಶ್ವರಿಯ ಚಲನವಲನಗಳ ಬಗ್ಗೆ ಅಭಿಮನ್ಯು ಸಿಂಗ್ ಬಾಲಮುರುಗನ್ಗೆ ಮಾಹಿತಿ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಬಾಲಮುರುಗನ್ ಮತ್ತು ಅಭಿಮನ್ಯು ಸಿಂಗ್ ಇಬ್ಬರೂ ಬಿಹಾರಕ್ಕೆ ತೆರಳಿ ಎರಡು ಪಿಸ್ತೂಲ್ಗಳನ್ನು ಖರೀದಿಸಿಕೊಂಡು ಬಂದಿದ್ದರು. ನಂತರ ಆ ಪೈಕಿ ಒಂದು ಪಿಸ್ತೂಲ್ ಅನ್ನು ತಮಿಳುನಾಡಿನ ಸೇಲಂ ಮೂಲದ ಮೌಳೇಶ್ ಎಂಬ ಆರೋಪಿಗೆ ನೀಡಿ ಭುವನೇಶ್ವರಿಯನ್ನು ಹತ್ಯೆ ಮಾಡುವ ಸುಪಾರಿ ನೀಡಲಾಗಿತ್ತು.
ಸುಪಾರಿ ಪಡೆದ ಮೌಳೇಶ್ ಬೆಂಗಳೂರಿಗೆ ಬಂದು ಭುವನೇಶ್ವರಿ ಕೆಲಸ ಮಾಡುತ್ತಿದ್ದ ಸ್ಥಳ ಹಾಗೂ ಓಡಾಡುವ ರಸ್ತೆಗಳಲ್ಲಿ ಕೆಲವು ದಿನಗಳ ಕಾಲ ಚಲನವಲನ ಗಮನಿಸಿದ್ದ. ಆದರೆ ಕೃತ್ಯ ಎಸಗುವ ದಿನ ಆತ ಕೈಕೊಟ್ಟು ತಮಿಳುನಾಡಿಗೆ ಮರಳಿದ್ದಾನೆ. ಇದರಿಂದ ಬೇಸತ್ತ ಬಾಲಮುರುಗನ್, ಬೇರೆಯವರಿಗೆ ಹಣ ಕೊಟ್ಟು ಕಾಯುವ ಬದಲು ತಾನೇ ಹತ್ಯೆ ನಡೆಸಲು ನಿರ್ಧರಿಸಿ ಪಿಸ್ತೂಲ್ ಹಿಡಿದು ಪತ್ನಿಯನ್ನು ಗುಂಡಿಟ್ಟು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ನಂತರ ಬಾಲಮುರುಗನ್ ತಾನೇ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದಾಗ ಪಿಸ್ತೂಲ್ ಮೂಲ, ಸಹಚರರು ಹಾಗೂ ಸುಪಾರಿ ವಿಚಾರಗಳು ಬೆಳಕಿಗೆ ಬಂದಿವೆ.
ಸುಪಾರಿ ಪಡೆದಿದ್ದ ಮೌಳೇಶ್ ಈಗಾಗಲೇ ತಮಿಳುನಾಡಿನಲ್ಲಿ ಮತ್ತೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾ ಗಿದ್ದರಿಂದ, ಮಾಗಡಿ ರಸ್ತೆ ಠಾಣೆ ಪೊಲೀಸರು ಇತ್ತೀಚಿಗೆ ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.



